ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈಚೆಗೆ ‘ಸಂಕಲ್ಪ್ 2017’ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ನಟ ಅಜಯ್ ರಾವ್, ನಟಿ ಕಾರುಣ್ಯ ರಾಮ್ ಹಾಗೂ ಅದಿತಿ ಪ್ರಭುದೇವ್ ನೃತ್ಯ ಮಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ವಾರ್ಷಿಕೋತ್ಸವ ಅಂಗವಾಗಿ ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ವಿಜೇತರಾದ ತಂಡಗಳಿಗೆ ಅಜಯ್ರಾವ್ ಬಹುಮಾನ ವಿತರಿಸಿದರು.
‘ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡಾ ಚಟುವಟಿಕೆಗಳು ದೈಹಿಕ, ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತವೆ. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಮಾಡಿದ ಕ್ರೀಡಾಪಟುಗಳು ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು’ ಎಂದು ಕಿವಿಮಾತು ಹೇಳಿದರು ಅಜಯ್ ರಾವ್.
ಸಪ್ತಗಿರಿ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯಸ್ಥ ಜಿ.ದಯಾನಂದ, ಕಾರ್ಯಕಾರಿ ನಿರ್ದೇಶಕ ಜಿ.ಡಿ.ಮನೋಜ್, ನಿರ್ದೇಶಕ ಡಾ. ಶ್ರೀನಿವಾಸನ್, ಪ್ರಾಂಶುಪಾಲ ಡಾ. ಅಶ್ವತ್ಥ್ ಕುಮಾರ್ ಇದ್ದರು.