ಕಡೂರು: ಎರಡು ತಲೆ ಹಾವನ್ನು (ಮಣ್ಣಮುಕ್ಕ) ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಡೂರು ತಾಲ್ಲೂಕಿನ ಅಂಚೆಚೋಮನಹಳ್ಳಿಯಲ್ಲಿ ಭಾನುವಾರ ಬಂಧಿಸಿದ್ದಾರೆ.
ಶಿವಮೊಗ್ಗದ ಮೈದಾಳಿನ ಮಲ್ಲೇಶ್ ಮತ್ತು ಮಂಜು, ಅಂಚೇ ಚೋಮನಹಳ್ಳಿಯ ನವೀನ ಮತ್ತು ಪ್ರದೀಪ ಬಂಧಿತರು. ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಅಂಚೇ ಚೋಮನಹಳ್ಳಿಯ ಬಾಪೂಜಿ ಕಾಲೊನಿಗೆ ಹೋಗುವ ರಸ್ತೆಯಲ್ಲಿ ಎರಡು ತಲೆ ಹಾವನ್ನು ಮಾರಾಟ ಮಾಡುವವರ ಬಳಿ ಮಾರುವೇಷದಲ್ಲಿ ಹೋಗಿ ಮೊದಲು ಇಬ್ಬರನ್ನು ವಶಕ್ಕೆ ಪಡೆದಿದ್ದು, ನಂತರ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಹಾವು, ಒಂದು ಬೈಕ್ ಹಾಗೂ ಮೂರು ಮೊಬೈಲ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ರೆಡ್ ಸ್ಯಾಂಡ್ ಬೋವಾ ಎಂದು ಕರೆಯಲ್ಪಡುವ ಈ ಹಾವಿಗೆ ಕನ್ನಡದಲ್ಲಿ ಮಣ್ಣುಮುಕ್ಕ ಎಂಬ ಹೆಸರಿದ್ದು, ಈ ಹಾವನ್ನು ಔಷಧಿಗಾಗಿ ಬಳಸುತ್ತಾರೆ. ಹಲವರಿಗೆ ಈ ಹಾವನ್ನು ಸಾಕುವುದು ಪ್ರತಿಷ್ಠೆಯ ವಿಷಯ. ಇದನ್ನು ಮನೆಯಲ್ಲಿ ಸಾಕಿದರೆ ಶ್ರೀಮಂತಿಕೆ ಬರುತ್ತದೆ ಎಂಬ ನಂಬಿಕೆಯೂ ಇದೆ.
ದಾಳಿ ನಡೆಸಿದ ತಂಡದಲ್ಲಿ ವಲಯ ಅರಣ್ಯಾಧಿಕಾರಿ ಮೋಹನ್, ಉಪರಣ್ಯಾಧಿಕಾರಿಗಳಾದ ಹರೀಶ್, ಮಂಜೇಗೌಡ, ರಾಮನಾಯ್ಕ, ಅರಣ್ಯ ರಕ್ಷಕರಾದ ಹೇಮಂತ್, ರಶ್ಮಿ, ವೀಕ್ಷಕರಾದ ಶಾಂತಪ್ಪ, ಸಿದ್ದಪ್ಪ, ಮೂರ್ತಿ, ಚಾಲಕ ಸಗಾಯ್ ರಾಜ್ ಇದ್ದರು. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.