ಶಿವಮೊಗ್ಗ: ಚಲನಚಿತ್ರಗಳು ಕೇವಲ ಮನರಂಜನೆಗೆ ಸೀಮಿತವಾಗಬಾರದು ಎಂದು ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ಹೇಳಿದರು. ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಭಾನುವಾರ ಯುಗ ಧರ್ಮ ಜಾನಪದ ಸಮಿತಿ, ಬೆಳ್ಳಿ ಮಂಡಲ ಹಾಗೂ ಸಿನಿಮೊಗೆ ಆಯೋಜಿಸಿದ್ದ ‘ಕಿರುಚಿತ್ರ ತಯಾರಿಕೆ ಕುರಿತ ವಿಶೇಷ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ಸಿನಿಮಾಗಳಲ್ಲಿನ ಮನರಂಜನೆ ಅಂಶಗಳ ಆಚೆಗೂ ಚಲನಚಿತ್ರವನ್ನು ನೋಡುವ ಕ್ರಮದಲ್ಲಿ ಬದಲಾವಣೆ ಯಾಗಬೇಕಿದೆ. ಮನರಂಜನೆ ಹಾಗೂ ಕಲಾತ್ಮಕ ಸಿನಿಮಾಗಳು ಎಂದು ವರ್ಗೀಕರಿಸದೆ, ಎಲ್ಲ ಚಿತ್ರಗಳೂ ಸಹ ವೀಕ್ಷಿಸಲು ಅರ್ಹ ಎಂಬ ಭಾವನೆಯಿಂದ ನೋಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ಒಂದು ಸಿನಿಮಾ ವೀಕ್ಷಿಸುವಾಗ ಸಿನಿಮಾದ ಸಂಪೂರ್ಣ ಆಶಯ ಗ್ರಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಮನರಂಜನೆಯ ಚಿತ್ರ
ಗಳನ್ನು ಜನ ಸ್ವೀಕರಿಸಿದರೆ, ನೋಡಲೇ ಬೇಕಾದ ಚಿತ್ರಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಬೆಳ್ಳಿಮಂಡಲ ಮಾಡುತ್ತಿದೆ ಎಂದರು.
‘ಅಂಬೆಗಾಲು’ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಅಧ್ಯಯನ ದೃಷ್ಟಿಕೋನದಿಂದಲೂ ಸಿನಿಮಾ ವೀಕ್ಷಿಸ ಬೇಕಿದೆ. ಯುವಜನತೆಯಲ್ಲಿ ಸಿನಿಮಾ ಅಭಿರುಚಿ ಹೆಚ್ಚಿಸುವ, ಕ್ರಿಯಾತ್ಮಕ ಚಟುವಟಿಕೆ ಬೆಳೆಸುವ ದೃಷ್ಟಿಯಿಂದ ಅಂಬೆಗಾಲು ಕಿರುಚಿತ್ರ ಸ್ಪರ್ಧೆ ಆಯೋಜನೆ ಉತ್ತಮ ಬೆಳವಣಿಗೆ. ಉತ್ಸಾಹಿ ಮನಸ್ಸುಗಳಿಗೆ ಸಿನಿಮಾ ಮಾಡಲು ಪ್ರೇರಣೆ ದೊರೆಯುತ್ತದೆ ಎಂದರು.
ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಸಿನಿಮಾವನ್ನು ಮೇಲ್ನೋಟದ ಗ್ರಹಿಕೆಯಿಂದ ಅರಿಯಲು ಸಾಧ್ಯವಿಲ್ಲ. ಚಲನಚಿತ್ರದ ಕುರಿತಾಗಿ ತಿಳಿದುಕೊಳ್ಳಲು ಆಳವಾದ ಗ್ರಹಿಕಾ ಶಕ್ತಿ ಅತ್ಯಂತ ಮುಖ್ಯ ಎಂದರು.
ಕಿರುಚಿತ್ರ ತಯಾರಿಕೆಯ ಕುರಿತು ವಿವಿಧ ಸಿನಿಮಾ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ‘ಅಂಬೆಗಾಲು’ ಸ್ಪರ್ಧೆ ಸಂಚಾಲಕ ಡಿ.ಎಸ್.ಅರುಣ್, ‘ಬೆಳ್ಳಿ
ಮಂಡಲ’ ಸಂಚಾಲಕ ವೈದ್ಯ, ಎಚ್.ಎಸ್.ನಾಗಭೂಷಣ, ಸಹನಾ ಚೇತನ್, ಶಿವಾನಂದ್, ಅನಂತ್ ಉಪಸ್ಥಿತರಿದ್ದರು.