ಸಿಂಧನೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ವಿಷಯಾನುಸಾರ ಶಿಕ್ಷಕರ ನೇಮಕ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಿಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ತಾಲ್ಲೂಕು ಘಟಕದಿಂದ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಶಾಲಾ ಕಟ್ಟಡ, ಆಟದ ಮೈದಾನ, ಸಿಬ್ಬಂದಿ ನೇಮಕಾತಿ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಕಂಪ್ಯೂಟರ್ ಸೌಲಭ್ಯ, ಕಂಪ್ಯೂಟರ್ ಪರಿಣಿತರ ನೇಮಕ ಮಾಡಬೇಕು. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ. ಆದರೆ ಸರ್ಕಾರ ಮಕ್ಕಳ ಹಾಜರಾತಿ ಕಡಿಮೆ ಎಂಬ ನೆಪದಲ್ಲಿ ಶಾಲೆಗಳನ್ನು ಹತ್ತಿರದ ಮತ್ತೊಂದು ಶಾಲೆಗೆ ವಿಲೀನ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಅನಂತರಾವ್ ಆಪಾದಿಸಿದರು.
ಪ್ರತಿ ತಿಂಗಳು ಒಂದರಂದು ಶಿಕ್ಷಕರಿಗೆ ವೇತನ ಬಟವಾಡೆಯಾಗಬೇಕು. ತಪ್ಪಿದಲ್ಲಿ ವಿಳಂಬಧೋರಣೆ ಅನುಸರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಆದೇಶ ಇಂದಿಗೂ ಜಾರಿಯಾಗಿಲ್ಲ. ಶಿಕ್ಷಕರಿಗೆ ಸರ್ಕಾರ ರೂಪಿಸಿರುವ ನಿಯಮದಡಿ ಸಕಾಲಕ್ಕೆ ಕಾಲ ಮಿತಿ ಬಡ್ತಿ, ಸ್ವಯಂಚಾಲಿತ ಬಡ್ತಿ, ವಿಶೇಷ ವಾರ್ಷಿಕ ಬಡ್ತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿ ಶಾಲೆಗೊಬ್ಬ ಪರಿಚಾರಕರನ್ನು ನೇಮಿಸಬೇಕು. ಶಿಕ್ಷಕರ ವೇತನ ತಾರತಮ್ಯ ಪರಿಹರಿಸಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ನಿಗದಿ ಮಾಡಬೇಕು. ಶಾಲಾ ನಿರ್ವಹಣೆ ಅನುದಾನ ವರ್ಷಕ್ಕೆ ₹50 ಸಾವಿರ ಮಂಜೂರು ಮಾಡಬೇಕು ಎಂದು ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿ.ಬಸವರಾಜ ಆಗ್ರಹಿಸಿದರು. ಜಿಲ್ಲಾ ಉಪಾಧ್ಯಕ್ಷ ರಮೇಶ ಅಗ್ನಿ, ಖಜಾಂಚಿ ಹುಸೇನಬಾಷಾ, ಪ್ರಧಾನ ಕಾರ್ಯದರ್ಶಿ ಪಂಪಾಪತಿ ಇದ್ದರು.