ಸುರಪುರ: ‘ಮಾದಿಗ ಸಮಾಜ ಸಂಘಟನೆಯ ಕೊರತೆ ಎದುರಿಸುತ್ತಿದೆ. ಈ ಸಮಾಜ ಮೀಸಲಾತಿ ಲಾಭ ಪಡೆಯಲು ವಿಫಲವಾಗಿದೆ. ಇದರಿಂದ ಎಲ್ಲ ರಂಗಗಳಲ್ಲೂ ಹಿಂದುಳಿದಿದೆ’ ಎಂದು ಮಾದಿಗ ದಂಡೋರ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣು ದಾಸನಕೇರಿ ವಿಷಾದಿಸಿದರು.
ತಾಲ್ಲೂಕಿನ ಅಡ್ಡೊಡಗಿ ಗ್ರಾಮದಲ್ಲಿ ಭಾನುವಾರ ಮಾದಿಗ ದಂಡೋರ ಮೀಸಲಾತಿ ಸಮಿತಿಯ ಗ್ರಾಮ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
‘ಮಂದಾಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಈಗ ಮಾದಿಗರು ಸಂಘಟಿತರಾಗುತ್ತಿದ್ದಾರೆ. ದೊಡ್ಡ ಮಟ್ಟದ ಹೋರಾಟಗಳ ಆಯೋಜಿಸಲಾಗುತ್ತಿದೆ. ನಮ್ಮ ಸಮಿತಿಯನ್ನು ಪ್ರತಿ ಗ್ರಾಮಗಳಲ್ಲಿ ಸಂಘಟಿಸುವ ಜತೆಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ’ ಎಂದರು.
ಡಯಟ್ ನೋಡಲ್ ಅಧಿಕಾರಿ ಪಂಡಿತ ನಿಂಬೂರ್ ಮಾತನಾಡಿ, ‘ಡಾ.ಬಾಬು ಜಗಜೀವನರಾಂ ಮಾದಿಗ ಜನಾಂಗದ ಆಶಾಕಿರಣ. ಅವರ ತತ್ವ ಸಂದೇಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ಸಮಾಜದ ಎಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು’ ಎಂದರು.
‘ಸರ್ಕಾರದ ಯೋಜನೆಗಳನ್ನು ಮಾದಿಗ ಸಮಾಜದವರಿಗೆ ತಲುಪಿಸಲು ಶ್ರಮಿಸಬೇಕು. ಸಮಾಜದವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅನ್ಯಾಯದ ವಿರುದ್ಧ ಹೋರಾಡಬೇಕು. ನಮ್ಮ ಹಕ್ಕುಗಳ ಪಡೆದುಕೊಳ್ಳಬೇಕು’ ಎಂದು ವಕೀಲ ಯಲ್ಲಪ್ಪ ಹುಲಿಕಲ್ ಸಲಹೆ ನೀಡಿದರು.
ತಾಲ್ಲೂಕು ಸಮಿತಿ ಅಧ್ಯಕ್ಷ ನಾಗರಾಜ ಓಕುಳಿ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ಭೈರಿಮಡ್ಡಿ, ಮಾನಪ್ಪ ಮೇಸ್ತ್ರಿ ದೇವದುರ್ಗ, ತಿಮ್ಮಣ್ಣ ಬಿಲ್ಲವ, ಹಣಮಂತ ಸಾಸಿಗಿರಿ, ಮರೆಪ್ಪಗೌಡ ದಳಪತಿ, ದೇವಿಂದ್ರಪ್ಪ ದೊಡ್ಡಮನಿ, ಹಣಮಂತ ದೊಡ್ಡಮನಿ, ಶರಣು ಸತ್ಯಂಪೇಟೆ, ತಿಪ್ಪಣ್ಣ ಶಾಬಾದಿ, ರತ್ನಪ್ಪ ಸತ್ಯಂಪೇಟೆ, ಮಲ್ಲಪ್ಪ ಸತ್ಯಂಪೇಟಿ, ರಮೇಶ ಕಟ್ಟಿಮನಿ, ಚಂದ್ರು ದೀವಳಗುಡ್ಡ, ಬಾಬು ಅರಿಷಣಗೇರಿ ಇದ್ದರು.