ಎಚ್.ಡಿ.ಕೋಟೆ: ಇಲ್ಲಿಗೆ ಸಮೀಪದ ಹೆಗ್ಗಡಾಪುರ ಮತ್ತು ನಾಗನಹಳ್ಳಿ ಗ್ರಾಮಗಳ ನಡುವಿನ ಬಾಲರಾಜ್ ಎಂಬುವವರ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬಾಲರಾಜ್ ಪತ್ನಿ ಶರ್ಮಿ ಹೂ ಕೊಯ್ಯುತ್ತಿದ್ದಾಗ ಅರಿಯದೆ ಹುಲಿ ಬಾಲದ ಸಮೀಪವೇ ಬಕೆಟ್ ಇಟ್ಟಿದ್ದಾರೆ. ನಂತರ, ಇವರು ಗಮನಿಸಿ ಭಯದಿಂದ ಚೀರಾಡಿದಾಗ, ಸ್ಥಳಕ್ಕೆ ಬಂದ ಇತರೆ ರೈತರು ಹುಲಿಯನ್ನು ಪಕ್ಕದ ತೋಟಕ್ಕೆ ಓಡಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಅರಿವಳಿಕೆ ಚುಚ್ಚುಮದ್ದು ನೀಡಲು ಯತ್ನಿಸಿದರೂ ಅದು ವಿಫಲವಾಯಿತು. ಬಳಿಕ ದಸರಾ ಆನೆ ‘ಅಭಿಮನ್ಯು’ ಕರೆಸಿಕೊಂಡು ಸಿಬ್ಬಂದಿ ಕಾರ್ಯಾಚರಣೆ ಮುಂದುವರಿ ಸಿದ್ದಾರೆ. ಸದ್ಯ, ನಾಗನಹಳ್ಳಿಯ ತೋಟವೊಂದರಲ್ಲಿ ಹುಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್, ಉಪ ಅರಣ್ಯ ಸಂರಕ್ಷಣಾ ಧಿಕಾರಿ ವಿ.ಕರಿಕಾಳನ್, ಅರಣ್ಯ ಇಲಾಖೆಯ ಪಶುವೈದ್ಯ ಉಮಾಶಂಕರ್, ಮೈಸೂರಿನ ಚಾಮರಾಜೇಂದ್ರ ಮೃಗಾಲ ಯದ ಪಶುವೈದ್ಯ ಮದನ್ ಸೇರಿದಂತೆ ಇತರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.