ಹಾಸನ: ವೀರಶೈವ ಸಮಾಜದಲ್ಲಿ ಸಾಕಷ್ಟು ಒಳಪಂಗಡ ಸೃಷ್ಟಿಸುವ ಮೂಲಕ ಮಠಾಧೀಶರು ಸಮುದಾಯ ನಾಶ ಮಾಡುತ್ತಿದ್ದಾರೆ. ಇನ್ನಾದರೂ ಯುವಜನತೆ ಎಚ್ಚೆತ್ತು ಸಂಘಟಿತ ರಾಗಬೇಕು ಇಲ್ಲದಿದ್ದಲ್ಲಿ ಸಮುದಾಯದ ಕುರುಹು ಸಿಗುವುದಿಲ್ಲ ಎಂದು ವೀರಶೈವ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಎಚ್.ಸಿ.ಬಸವರಾಜ್ ಆತಂಕ ವ್ಯಕ್ತಪಡಿಸಿದರು.
ವೀರಶೈವ ಹಿತರಕ್ಷಣಾ ವೇದಿಕೆ ವತಿಯಿಂದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರಶೈವ ಚಿಂತನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ತುಳಿತಕ್ಕೆ ಒಳಗಿರುವ ವೀರಶೈವ ಸಮುದಾಯ ಅಸ್ತಿತ್ವಕ್ಕೆ ಪರದಾಡುತ್ತಿದೆ. ಸಮುದಾಯ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಂಘಟಿತರಾಗ ಬೇಕು. ಹಳೆ ಮೈಸೂರು ಭಾಗದ 49 ವಿಧಾನಸಭಾ ಕ್ಷೇತ್ರಗಳಲ್ಲಿ ಸಮು ದಾಯದ ಒಬ್ಬ ಶಾಸಕರಿಲ್ಲ. ಮಠಾಧೀಶರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಶೈವ ಪಂಥದ ವಿಚಾರಧಾರೆಗಳನ್ನು ಮೈಗೂಡಿಸಿ ಕೊಂಡು ಇತರ ಸಮುದಾಯಕ್ಕೆ ಆಸರೆಯಾಗಬೇಕು ಎಂದು ಹೇಳಿದರು.
ಸರ್ಕಾರದಿಂದ ಸಮುದಾಯಕ್ಕೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಬಿ.ಎಸ್.ಯಡಿಯೂರಪ್ಪ ಮಾತ್ರ ರಾಜ ಕೀಯದಲ್ಲಿ ಸಮುದಾಯ ಪ್ರತಿನಿಧಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ನಾಯಕನನ್ನು ನಾವು ರೂಪಿಸಬೇಕು. ಆಂತರಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಶಕ್ತಿ ಪ್ರದರ್ಶಿಸಬೇಕು. ರಾಜಕೀಯವಾಗಿ ಸದೃಢರಾದಲ್ಲಿ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.
ವೀರಶೈವ ಹಿತರಕ್ಷಣಾ ವೇದಿಕೆ ಅಧ್ಯಕ್ಷ ತಮ್ಮಣ್ಣ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಸಮುದಾಯದಿಂದ ಪ್ರತಿನಿಧಿಸಿದ್ದ ರಾಜಶೇಖರಮೂರ್ತಿ ವಿರುದ್ಧ ಸ್ಪರ್ಧಿಸಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದೇನೆ. ನಂತರದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ಮೋಸ ಮಾಡಿದರು. ಬಿಜೆಪಿ ಲಿಂಗಾಯತರಿಗೆ ಟಿಕೆಟ್ ನೀಡುವು ದಿಲ್ಲ. ಆದರೆ, ಆ ಸಮುದಾಯದ ಮತಗಳಿಂದಲೇ ಜಯ ಗಳಿಸುತ್ತಾರೆ ಎಂದರು.
ವೇದಿಕೆ ಸಂಚಾಲಕ ಶಿವಲಿಂಗ ಶಾಸ್ತ್ರಿ ಮಾತನಾಡಿ, ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಸಮುದಾಯದ ಅಭ್ಯರ್ಥಿಗಳು ವಿಜೇತ ರಾಗಬೇಕು. ಅದಕ್ಕೆ ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಚಂದ್ರಶೇಖರ್, ಬಿ.ಆರ್.ಗುರುದೇವ್, ಕುಮುದಾ, ರವಿಕುಮಾರ್, ಬಸವರಾಜ್, ಬಿ.ಶಿವರುದ್ರಪ್ಪ, ನಾಗೇಶ್, ಕಟ್ಟಾಯ ಶಿವಕುಮಾರ್ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.