ಕೋಲಾರ: ನೀರಾವರಿ ಯೋಜನೆ ಜಾರಿಗಾಗಿ ಒತ್ತಾಯಿಸಿ ನಗರದಲ್ಲಿ ನಡೆಯುತ್ತಿರುವ ನೀರಾವರಿ ಹೋರಾಟ 283ನೇ ದಿನಕ್ಕೆ ಕಾಲಿಟ್ಟಿದ್ದು, ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಮತ್ತು ಸಾಯಿಲ್ ಸಂಸ್ಥೆಯ ಸದಸ್ಯರು ಬೆಂಬಲ ವ್ಯಕ್ತಪಡಿಸಿ ಮಂಗಳವಾರ ಪ್ರತಿಭಟನಾ ಮರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿನಿ ಪ್ರಿಯಾಂಕ ಮಾತನಾಡಿ, ‘ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿದ್ದು ಸಮಸ್ಯೆಯನ್ನು ಬಗೆಹರಿಸಬೇಕಾದ ಜನಪ್ರತಿನಿಧಿಗಳು ಕಾಣೆಯಾಗಿದ್ದಾರೆ’ ಎಂದು ಆರೋಪಿಸಿದರು.
ಈಗಾಗಲೇ ಜಿಲ್ಲೆಯ ಜನ ಫ್ಲೋರೈಡ್ ನೀರನ್ನು ಕುಡಿಯುವ ಮೂಲಕ ಅರ್ಧ ಆಯಸ್ಸನ್ನು ಕಳೆದುಕೊಂಡಿದ್ದಾರೆ. ಬೆಂಗಳೂರಿನ ಚಲ್ಲಘಟ್ಟ ಕೆರೆಯ ಕೋಳಚೆ ನೀರನ್ನು ಕೊಟ್ಟು ಸಂಪೂರ್ಣವಾಗಿ ನಾಶ ಮಾಡಲು ಸರ್ಕಾರ ಸಂಚು ರೂಪಿಸಿರುವ ಅನುಮಾನ ಕಾಡುತ್ತಿದೆ. ಮೂರು ಬಾರಿ ನೀರನ್ನು ಶುದ್ಧೀಕರಿಸದೆ ಕೆರೆಗಳಿಗೆ ಹರಿಸಿದರೆ ಅಪಾಯ ತಪ್ಪಿದಲ್ಲ ಎಂದು ಆತಂಕವ್ಯಕ್ತಪಡಿಸಿದರು.
ಬಯಲುಸೀಮೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆಗೆ ಸಿಕ್ಕಿ ವಿವಿಧ ಕಾಯಿಲೆಗಳಿಂದ ಜನ ನರಳುತ್ತಿರುವ ಬಗ್ಗೆ ಅನೇಕ ಮಂದಿ ವೈದ್ಯರು, ತಜ್ಞರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಏನು ತಿಳಿಯದೆ ಹಾಗೆ ಸರ್ಕಾರ ಮೌನವಹಿಸುತ್ತಿರುವುದು ನಾವು ಮಾಡಿಕೊಂಡಿರುವ ಅಪಾಯವಾಗಿದೆ ಎಂದರೆ ತಪ್ಪಾಗಲಾರದು ಎಂದರು.
ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ರಾಜಣ್ಣ, ಗುಂಡಪ್ಪ, ಮೋಹನ್ ಕುಮಾರ್, ವಿದ್ಯಾರ್ಥಿಗಳಾದ ವಿ.ಸುರೇಶ್, ಮುರಳಿ, ನವ್ಯ, ಅನಿತಾ, ಹೇಮಾ, ಸೌಮ್ಯ, ವಿನುತಾ, ಕವನಾ, ಮಮತಾ, ಅರುಣಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.