ಅಣ್ಣಿಗೇರಿ: ಸ್ಥಳೀಯ ಪುರಸಭೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಷ್ಠಾಪನೆಗೆ ಮುಖ್ಯಾಧಿಕಾರಿ ಬಿ.ಎಫ್.ಜಿಡ್ಡಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಕಾರ್ಯಕರ್ತರು ಪ್ರತಿಭಟಿಸಿದರು.
ಈ ಸಂಬಂಧ ಮುಖ್ಯಾಧಿಕಾರಿ ಜಿಡ್ಡಿ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ ಸಂಘಟನೆಯ ಕಾರ್ಯಕರ್ತರು, ಪ್ರತಿಮೆ ಪ್ರತಿಷ್ಠಾಪನೆಗೆ ಅಡ್ಡಿಪಡಿಸದಂತೆ ಪಟ್ಟುಹಿಡಿದರು.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸಿಪಿಐ ಪಿ.ಎಂ.ದಿವಾಕರ, ಅಣ್ಣಿಗೇರಿ ಪಿಎಸ್ಐ ಎಂ.ಆರ್.ಕಾಳೆ, ಪ್ರತಿಭಟನಾಕಾರರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಘಟನೆ ವಿವರ: ಪುರಸಭೆ ಆವರಣದಲ್ಲಿ ಅಂಬೇಡ್ಕರ್ ಕಟೌಟ್ ಅನ್ನು ಕಾಯಂ ಆಗಿ ಅಳವಡಿಸಬೇಕು.
ಈ ಕಟೌಟ್ನ ಹಿಂದೆ ಕಂಬವೊಂದನ್ನು ನಿರ್ಮಿಸಿ, ಅಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು ಎಂಬ ಉದ್ದೇಶದಿಂದ ಡಿಎಸ್ಎಸ್ನ ಕೆಲ ಕಾರ್ಯಕರ್ತರು ಕಂಬ ನಿರ್ಮಿಸಲು ಮುಂದಾಗಿದ್ದಾರೆ.
ಈ ಕಾಮಗಾರಿಗೆ ಅಡ್ಡಿಪಡಿಸಿದ ಪುರಸಭೆ ಮುಖ್ಯಾಧಿಕಾರಿ ಬಿ.ಎಫ್.ಜಿಡ್ಡಿ, ನಂತರ ತಹಶೀಲ್ದಾರ್ ನವೀನ್ ಹುಲ್ಲೂರ ಅವರೊಂದಿಗೆ ಸ್ಥಳಕ್ಕೆ ಬಂದು ಕಾಮಗಾರಿಯನ್ನು ನಿಲ್ಲಿಸಿದರು ಎನ್ನಲಾಗಿದೆ. ಅಲ್ಲದೆ, ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದೇ ಕಾರಣಕ್ಕೆ ಸಂಘಟನೆ ಕಾರ್ಯಕರ್ತರು ಮುಖ್ಯಾಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದಾಗ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು, ಮುಂಬರುವ ಪುರಸಭೆ ಸಭೆಯಲ್ಲಿ ಈ ಸಂಬಂಧ ಚರ್ಚಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಡಿಎಸ್ಎಸ್ ಮುಖಂಡರಾದ ಹನಮಂತಪ್ಪ ಚಲವಾದಿ, ಶಿವಪ್ಪ ಅಬ್ಬಿಗೇರಿ, ಸತ್ಯೆಪ್ಪ ದೊಡ್ಡಮನಿ, ಪುಷ್ಪಾವತಿ ಹಲಗಿ, ರಾಘವೇಂದ್ರ ರಾಮಗಿರಿ ಇದ್ದರು.