ಹೊನ್ನಾವರ: ಪ್ರಕೃತಿಯಲ್ಲಿ ಸಮ ತೋಲನ ಕಾಯ್ದುಕೊಳ್ಳಲು ಅರಣ್ಯದ ಪಾತ್ರ ಮಹತ್ವದ್ದಾಗಿದ್ದು ಅರಣ್ಯ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕಿದೆ’ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ಅಭಿಪ್ರಾಯಪಟ್ಟರು.
ವಿಶ್ವ ಅರಣ್ಯ ದಿನದ ಅಂಗವಾಗಿ ‘ಅರಣ್ಯ ಮತ್ತು ಶಕ್ತಿ’ ಧ್ಯೇಯ ವಾಕ್ಯದೊಂದಿಗೆ ಖರ್ವಾ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರಣ್ಯ ನಾಶದಿಂದ ಪ್ರಕೃತಿಯಲ್ಲಿ ಹವಾಮಾನ ವೈಪರೀತ್ಯ,ಜಾಗತಿಕ ತಾಪಮಾನದಲ್ಲಾಗುವ ಏರಿಕೆ ಮೊದಲಾದ ದುಷ್ಟಪರಿಣಾಮಗಳು ಉಂಟಾಗುತ್ತವೆ’ ಎಂದು ಹೇಳಿದರು.
‘ಭವಿಷ್ಯದಲ್ಲಿ ಉಂಟಾಗಬಹುದಾದ ಆಪತ್ತನ್ನು ಮನಗಂಡು ವಿದ್ಯಾರ್ಥಿಗಳು ಹಾಗೂ ಪಾಲಕರು ಅರಣ್ಯ ರಕ್ಷಣೆಯಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕು’ ಎಂದು ಅವರು ಸಲಹೆ ನೀಡಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಲೋಕೇಶ ನಾಯ್ಕ ಮಾತನಾಡಿ,ಅರಣ್ಯ ಸಂರಕ್ಷಣೆ ಹಾಗೂ ಬೆಳೆಸುವಿಕೆ ಉಳಿದ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಹೇಳಿದರು. ಗ್ರಾ. ಪಂ.ಸದಸ್ಯ ಬಾಬು ನಾಯ್ಕ,ಎಸ್ಡಿಎಂಸಿ ಅಧ್ಯಕ್ಷ ಮಂಜು ನಾಥ ಗೋವಿಂದ ಗೌಡ,ಮುಖ್ಯ ಶಿಕ್ಷಕ ಕೃಷ್ಣ ಗೌಡ,ಅರಣ್ಯ ಇಲಾಖೆಯ ಸಿಬ್ಬಂದಿ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.