ಶಿರಸಿ: ಇಲ್ಲಿನ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯು ‘ಗ್ರೀನ್ ಗೋಲ್ಡ್’ ಎಂಬ ಹೆಸರಿನಲ್ಲಿ ಸಾವಯವ ಗೊಬ್ಬರವನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ರೈತರು ರಾಸಾಯನಿಕ ಗೊಬ್ಬರವನ್ನು ಬಳಸದೇ ತಮ್ಮ ಅಡಿಕೆ, ಕಾಳುಮೆಣಸು, ತೆಂಗು, ವೆನಿಲ್ಲಾ ಹಾಗೂ ಶುಂಠಿ ಬೆಳೆಗಳಲ್ಲಿ ಸಮೃದ್ಧ ಇಳುವರಿ ಇದರಿಂದ ಪಡೆಯಬಹುದಾಗಿದೆ.
ಸಾವಯವ ಗೊಬ್ಬರಕ್ಕೆ ಪ್ರಮುಖ ಸೂಕ್ಷ್ಮ ಜೀವಿಗಳನ್ನು ಸೇರಿಸಿ ಗೊಬ್ಬರದ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ಪ್ರಧಾನ ಮತ್ತು ಲಘು ಪೋಷಕಾಂಶದ ಜತೆಗೆ ಜೈವಿಕ ಮಿಶ್ರಿತ ಪರಿಪೂರ್ಣ ಸಾವಯವ ಗೊಬ್ಬರ ಇದಾಗಿದ್ದು, ಮಣ್ಣಿನ ಫಲವತ್ತತೆ ಹೆಚ್ಚಿಸುವುದರ ಜತೆಗೆ ಎಲ್ಲ ಬೆಳೆಗಳಿಗೆ ಸೂಕ್ತವಾದದ್ದಾಗಿರುತ್ತದೆ.
ಶುಭಾರಂಭದ ಕೊಡುಗೆಯಾಗಿ ರೈತ ಸದಸ್ಯರು ಕರಪತ್ರವನ್ನು ತಂದು ಪ್ರತಿ ಚೀಲಕ್ಕೆ ₹ 5 ರಂತೆ ರಿಯಾಯಿತಿ ಪಡೆಯಬಹುದಾಗಿದೆ. ಈ ಕೊಡುಗೆಯು ಏಪ್ರಿಲ್ 30 ರವರೆಗೆ ಜಾರಿಯಲ್ಲಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಅಶೋಕ ಮೊರಬ್ ಉಪಸ್ಥಿತರಿದ್ದರು. ಒಂದು ಸಾವಿರ ಚೀಲ ‘ಗ್ರೀನ್ ಗೋಲ್ಡ್’ ಸಾವಯವ ಗೊಬ್ಬರ ಖರೀದಿಸಿದ ರೂಪೇಶ್ ಪಿ.ಪಿ. ಹಿರೇಜಂಬೂರು ಅವರಿಗೆ ಒಂದು ಚೀಲವನ್ನು ಉಚಿತವಾಗಿ ಇದೇ ವೇಳೆ ನೀಡಲಾಯಿತು.