ಶಹಾಪುರ: ತಾಲ್ಲೂಕಿನ ಸಗರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಈಶ್ವರಪ್ಪ ಗಾಯಿ ಸಾಲದ ಮೊತ್ತ ₹12.50 ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ ಖುಷ್ಬೂ ಗೋಯಲ್ ಚೌದರಿ ಸೋಮವಾರ ಸೂಚಿಸಿದ್ದಾರೆ.
ಉಪ ವಿಭಾಗಾಧಿಕಾರಿ ಹಾಗೂ ಲೀಡ್ ಬ್ಯಾಂಕಿನ ವ್ಯವಸ್ಥಾಪಕರು 2017 ಫೆಬ್ರವರಿ 16ರಂದು ಜಂಟಿಯಾಗಿ ಭೇಟಿ ನೀಡಿ ಅನುಪಾಲನಾ ವರದಿ ಜಿಲ್ಲಾಧಿಕಾರಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಯಾದಗಿರಿ ಸಹಕಾರ ಸಂಘದ ಉಪ ನಿಬಂಧಕ ಕಳಸಣ್ಣನಿಗೆ ಸೂಚನೆ ನೀಡಿದ್ದಾರೆ.
ಇನ್ನೂ ಎಫ್ಐಆರ್ ಇಲ್ಲ: ಯಾದಗಿರಿ ಸಹಕಾರ ಸಂಘದ ಉಪ ನಿಬಂಧಕ ಕಳಸಣ್ಣ ಅವರು ಮಂಗಳವಾರ ಜಿಲ್ಲಾಧಿಕಾರಿ ಸೂಚನೆ ಯಂತೆ ಈಶ್ವರಪ್ಪ ಗಾಯಿ ವಿರುದ್ಧ ದೂರು ದಾಖಲಿಸಲು ಮನವಿ ಮಾಡಿದ್ದರು. ಆದರೆ, ಇನ್ನೂ ದೂರು ದಾಖಲಿಸಿಲ್ಲ ಎಂದು ಸಹಕಾರ ಸಂಘದ ಅಧಿಕಾರಿ ತಿಳಿಸಿದ್ದಾರೆ.