ಮದ್ದೂರು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಹೈನು ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಜಾನುವಾರು ವಿಮೆ ಹಾಗೂ ಹಲವು ಸಲವತ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಕದಲೂರು ರಾಮಕೃಷ್ಣ ತಿಳಿಸಿದರು.
ಸಮೀಪದ ಗೆಜ್ಜಲಗೆರೆ ಮನ್ಮುಲ್ ಡೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಆಕಸ್ಮಿಕ ಅಥವಾ ಸಹಜ ಮರಣದಿಂದಾಗುವ ಆರ್ಥಿಕ ನಷ್ಟ ತಪ್ಪಿಸಲು ಒಕ್ಕೂಟದ ವ್ಯಾಪ್ತಿಯಲ್ಲಿ ವಿಮೆ ಮಾಡಿಸುವ ರಾಸುಗಳಿಗೆ ಶೇ 70ರ ರಿಯಾಯಿತಿ ದರದಲ್ಲಿ ಅಂದಾಜು 30,000 ಹಾಲು ಉತ್ಪಾದಕರ ರಾಸುಗಳಿಗೆ ₹ 1.68 ಕೋಟಿ ಪ್ರೀಮಿಯಮ್ ಮೊತ್ತವನ್ನು ಒಕ್ಕೂಟ ಭರಿಸುತ್ತಿದೆ ಎಂದರು.
ಜಾನುವಾರುಗಳಿಗೆ ಮೇವಿನ ಕೊರತೆ ಉದ್ಭವಿಸಿದ್ದು, ಒಕ್ಕೂಟದ ವತಿಯಿಂದ ಮೇವಿನ ಜೋಳ ವಿತರಣೆ ಮಾಡಲು ಯೋಜಿಸಲಾಗಿದೆ. 1,800 ಕ್ವಿಂಟಲ್ ಬಹು ಕಟಾವಿನ ಮೇವಿನ ಜೋಳ, 600 ಕ್ವಿಂಟಲ್ ಆಫ್ರಿಕನ್ ಟಾಲ್ ಮುಸುಕಿನ ಜೋಳವನ್ನು ಹಾಲು ಉತ್ಪಾದಕರಿಗೆ ಶೇ 50ರ ರಿಯಾಯಿತಿ ದರದಲ್ಲಿ ವಿತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಪಶು ಅಹಾರ ಖರೀದಿಸಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ 2016ರ ನವೆಂಬರ್ ತಿಂಗಳಿನಿಂದ 3 ಬಾರಿ ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಇದಲ್ಲದೇ ಒಕ್ಕೂಟದ ವತಿಯಿಂದ ₹ 26 ಲಕ್ಷ ಮೌಲ್ಯದ ನೇಪಿಯಾರ್ ಮೇವಿನ ಬಿತ್ತನೆ ಕಾಂಡವನ್ನು ವಿತರಿಸಲಾಗಿದೆ.