ನವದೆಹಲಿ: ಕೋಲಾರ ಚಿನ್ನದ ಗಣಿ (ಕೆಜಿಎಫ್) ಪುನಶ್ಚೇತನ ಕಾರ್ಯ ‘ತಾಂತ್ರಿಕ ಮತ್ತು ಆರ್ಥಿಕ’ ಕಾರ್ಯಸಾಧ್ಯತೆ ಮೇಲೆ ಅವಲಂಬಿತವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೋಲಾರ ಚಿನ್ನದ ಗಣಿಯ ಉಳಿದ ಪ್ರದೇಶದಲ್ಲಿ ಚಿನ್ನ ಇರುವ ಸಾಧ್ಯತೆ ಕುರಿತು ಸಮೀಕ್ಷೆ ಮಾಡಲಾಗುತ್ತಿದೆ ಎಂದು ಗಣಿ ಸಚಿವ ಪೀಯೂಷ್ ಗೋಯೆಲ್ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕೋಲಾರ ನಿಕ್ಷೇಪದಲ್ಲಿ ಇನ್ನೂ ದೊರೆಯಬಹುದಾದ ಚಿನ್ನದ ಅದಿರು ಪ್ರಮಾಣದ ಬಗ್ಗೆ ಖನಿಜ ಸಂಶೋಧನಾ ನಿಗಮವು (ಎಂಇಸಿಎಲ್) ಇತ್ತೀಚೆಗೆ ವರದಿ ನೀಡಿದೆ.
ಈ ವರದಿಯನ್ನು ಆಧರಿಸಿ ಕೆಜಿಎಫ್ ನಿರ್ವಹಣೆ ಮಾಡುತ್ತಿರುವ ಭಾರತ್ ಗೋಲ್ಡ್ಮೈನ್ಸ್ ಲಿಮಿಟೆಡ್ನ (ಬಿಜಿಎಂಎಲ್) ಪುನಶ್ಚೇತನದ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.
2001ರ ಮಾರ್ಚ್1ರಿಂದ ಬಿಜಿಎಂಎಲ್ ಕಾರ್ಯ ಸ್ಥಗಿತಗೊಳಿಸಿದ್ದು, ಸಂಸ್ಥೆಗೆ ಸೇರಿದ ಆಸ್ತಿಯನ್ನು ಮಾರಾಟ ಮಾಡಿ ಸಾಲ ತೀರಿಸಲು 2006ರಲ್ಲಿ ಕೇಂದ್ರ ಸಂಪುಟ ತೀರ್ಮಾನ ತೆಗೆದುಕೊಂಡಿತ್ತು.
ಆದರೆ, ಕಾನೂನಾತ್ಮಕ ಸಮಸ್ಯೆ ಎದುರಾದ ಕಾರಣ ಆಸ್ತಿ ಮಾರಾಟ ಸಾಧ್ಯವಾಗಿರಲಿಲ್ಲ. ಸುಪ್ರೀಂ ಕೋರ್ಟ್ 2013ರಲ್ಲಿ ಆಸ್ತಿ ಮಾರಾಟಕ್ಕೆ ಟೆಂಡರ್ ಕರೆಯಲು ಒಪ್ಪಿಗೆ ನೀಡಿದೆ.