ನವದೆಹಲಿ: ಜುಲೈ 1ರಿಂದಲೇ ದೇಶದಾದ್ಯಂತ ಏಕರೂಪ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ (ಜಿಎಸ್ಟಿ) ಜಾರಿಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಎಸ್ಟಿ ಜಾರಿಯ ನಂತರ ದಿನಬಳಕೆಯ ಆಹಾರ ಸಾಮಗ್ರಿಗಳು ಅಗ್ಗವಾಗಲಿದ್ದು, ತೆರಿಗೆ ವಂಚನೆಗೆ ಕಡಿವಾಣ ಬೀಳಲಿದೆ ಎಂದು ಅವರು ಭರವಸೆ ನೀಡಿದರು.
ಬುಧವಾರ ನಡೆದ 23ನೇ ಕಾಮನ್ವೆಲ್ತ್ ಆಡಿಟರ್ ಜನರಲ್ ಸಮಾವೇಶದಲ್ಲಿ ಅವರು ಈ ವಿಷಯ ತಿಳಿಸಿದರು. ನೋಟು ರದ್ದತಿಯ ನಿರ್ಧಾರದ ನಂತರ ದೇಶದ ಆರ್ಥಿಕ ಪ್ರಗತಿಯ ಗತಿ ಏರಿಕೆಯಾಗಲಿದ್ದು , ಜಿಡಿಪಿ ದರ ಶೇ 7–8ಕ್ಕೆ ತಲುಪಲಿದೆ ಎಂದು ಜೇಟ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದರು.