ಅಮೃತಸರ: ಸಚಿವ ಸ್ಥಾನ ನಿಭಾಯಿಸುವುದರ ಜತೆಗೆ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಪ್ರಖ್ಯಾತ ಹಾಸ್ಯ ಕಾರ್ಯಕ್ರಮದಲ್ಲಿಯೂ ಮುಂದುವರಿಯುತ್ತೇನೆ’ ಎಂದು ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸರ್ಕಾರದ ಸಂಸ್ಕೃತಿ ಖಾತೆ ಸಚಿವ ನವಜೋತ್ ಸಿಂಗ್ ಸಿಧು ಸ್ಪಷ್ಟನೆ ನೀಡಿದ್ದಾರೆ.
ಸಿಧು ಅವರು ಸಚಿವರಾಗಿದ್ದುಕೊಂಡು ಟಿ.ವಿ ಕಾರ್ಯಕ್ರಮದಲ್ಲಿ ಮುಂದುವರಿಯುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಮನೆ ನಿರ್ವಹಣೆಗೆ ಹಣ ಬೇಕು. ಹೀಗಾಗಿ ಕಾರ್ಯಕ್ರಮದಲ್ಲಿ ಮುಂದುವರಿಯುತ್ತೇನೆ. ನಾನು ಬೆಳಿಗ್ಗೆಯಿಂದ ಸಂಜೆವರೆಗೂ ಭ್ರಷ್ಟಾಚಾರದಲ್ಲಿ ತೊಡಗಬೇಕೆಂದು ನೀವು ಬಯಸುತ್ತೀರಾ’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಖಾತೆ ಬದಲಾವಣೆ ಸುಳಿವು: ಟಿ.ವಿ ಕಾರ್ಯಕ್ರಮದಲ್ಲಿ ಮುಂದುವರಿಯುವುದಾಗಿ ಹೇಳಿರುವ ಸಿಧು ಅವರನ್ನು ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆಯಿಂದ ಬದಲಾಯಿಸುವ ಸುಳಿವನ್ನು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೀಡಿದ್ದಾರೆ. ಈ ಬಗ್ಗೆ ಕಾನೂನು ಸಲಹೆಯನ್ನೂ ಅವರು ಕೇಳಿದ್ದರು.