ಜೈಪುರ: ಅಜ್ಮೀರ್ ದರ್ಗಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ವಿಶೇಷ ನ್ಯಾಯಾಲಯವು ಬುಧವಾರ ಭವೇಶ್ ಪಟೇಲ್ ಮತ್ತು ದೇವೇಂದ್ರ ಗುಪ್ತಾಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪಟೇಲ್ಗೆ ₹10 ಸಾವಿರ ಹಾಗೂ ಗುಪ್ತಾಗೆ ₹5ಸಾವಿರ ದಂಡವನ್ನೂ ವಿಧಿಸಿದೆ. ಅಜ್ಮೀರ್ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ 2007 ಅಕ್ಟೋಬರ್ 11ರಂದು ನಡೆದ ಬಾಂಬ್ ಸ್ಫೋಟದಲ್ಲಿ ಮೂವರು ಮೃತಪಟ್ಟು, 15 ಮಂದಿ ಗಾಯಗೊಂಡಿದ್ದರು.
ಪ್ರಕರಣದಲ್ಲಿ ಭವೇಶ್ ಪಟೇಲ್, ದೇವೇಂದ್ರ ಗುಪ್ತಾ ಹಾಗೂ ಜೋಷಿ ತಪ್ಪಿತಸ್ಥರೆಂದು ಮಾರ್ಚ್ 8ರಂದು ನ್ಯಾಯಾಲಯವು ಹೇಳಿತ್ತು. ಇವರಲ್ಲಿ ಜೋಷಿ ಮೃತಪಟ್ಟಿದ್ದಾರೆ. ಸ್ವಾಮಿ ಅಸೀಮಾನಂದ ಹಾಗೂ ಇತರರನ್ನು ನ್ಯಾಯಾಲಯ ಖುಲಾಸೆ ಗೊಳಿಸಿತ್ತು.
ಆರಂಭದಲ್ಲಿ ಪ್ರಕರಣದ ತನಿಖೆಯನ್ನು ರಾಜಸ್ತಾನದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿತ್ತು. ಅನಂತರ ಎನ್ಐಎಗೆ ಹಸ್ತಾಂತರಿಸಲಾಗಿತ್ತು.
2011 ಏಪ್ರಿಲ್ 6ರಂದು ನವ ದೆಹಲಿಯ ಎನ್ಐಎ ಠಾಣೆಯಲ್ಲಿ ಮರು ಪ್ರಕರಣ ದಾಖಲಾಗಿತ್ತು. 149 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಿ ಹಾಗೂ 451 ದಾಖಲೆಗಳನ್ನು ಪರಿಶೀಲಿಸಿ ಎನ್ಐಎ ಮೂರು ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿತ್ತು.