ಗುಬ್ಬಿ: ‘ತೆಂಗು ಉತ್ಪನ್ನಗಳನ್ನು ತಯಾರಿಸಿ, ತೆಂಗು ಬೆಳೆಗಾರರನ್ನು ಉತ್ತೇಜಿಸುವ ಯೋಜನೆಯನ್ನು ತಾಲ್ಲೂಕು ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದು ತೆಂಗು ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಿ.ವೆಂಕಟಾಚಲಯ್ಯ ತಿಳಿಸಿದರು.
ತಾಲ್ಲೂಕಿನ ನಿಟ್ಟೂರು, ಕಡಬ ಹೋಬಳಿ ವ್ಯಾಪ್ತಿಯ ಮಾರಶೆಟ್ಟಿಹಳ್ಳಿ, ಸುಂಕಪುರ ಭಾಗದಲ್ಲಿ ಮಂಗಳವಾರ ‘ತೆಂಗು ಉಪ ಉತ್ಪನ್ನ ತಯಾರಿಕಾ ಕೇಂದ್ರ’ ಸ್ಥಾಪಿಸುವ ಅಂಗವಾಗಿ ಕ್ಷೇತ್ರ ಪ್ರವಾಸ ನಡೆಸಿ ಮಾತನಾಡಿದರು.
‘ಈ ಯೋಜನೆಗೆ 100 ಎಕರೆ ಭೂಮಿ ಬೇಕಿದೆ. ಭೂಮಿಗಾಗಿ ಶೋಧ ನಡೆದಿದೆ. ತಿಪಟೂರು, ತುರುವೇಕೆರೆ, ಗುಬ್ಬಿ ಭಾಗದಲ್ಲಿ ತೆಂಗು ಬೆಳೆ ಹೆಚ್ಚು ಇದೆ. ಗುಬ್ಬಿ ತಾಲ್ಲೂಕನ್ನು ಕೇಂದ್ರ ಮಾಡಿಕೊಂಡು 35ಕ್ಕೂ ಅಧಿಕ ತೆಂಗಿನ ಉತ್ಪನ್ನಗಳನ್ನು ತಯಾರಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಸ್ಥಳೀಯ ರೈತರ ಕೈಹಿಡಿದಂತಾಗುತ್ತದೆ’ ಎಂದು ಹೇಳಿದರು.
ತುಮಕೂರು ಅಭಿವೃದ್ಧಿ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಮಾತನಾಡಿದರು. ರಾಜ್ಯ ಅಸಂಘಟಿತ ಕಾರ್ಮಿಕರ ವಲಯದ ನಿರ್ದೇಶಕ ಡಿ.ಕೆ.ಗಂಗಾಧರ್, ಸಾಗಸಂದ್ರ ದೇವರಾಜ್, ನಂದಿಹಳ್ಳಿ ರಮೇಶ್, ಹೊನ್ನವಳ್ಳಿ ಕುಮಾರ್ ಇದ್ದರು.