ಚಿಂತಾಮಣಿ: ನಗರದ ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 128 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಕಾಲೇಜಿನ ಯುವ ರೆಡ್ಕ್ರಾಸ್ ಘಟಕ, ಎನ್ಸಿಸಿ ಘಟಕ, ರೋವರ್ಸ್ ಘಟಕಗಳು ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಕಾಲೇಜಿನ ವಿವಿಧ ಘಟಕಗಳ ಸದಸ್ಯರ ಜತೆಗೆ ಉಪನ್ಯಾಸಕರು, ಸಿಬ್ಬಂದಿ, ನಾಗರಿಕರು ಸಹ ಭಾಗವಹಿಸಿ ರಕ್ತದಾನ ಮಾಡಿದರು.
ಇಂಡಿಯನ್ ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಕಾರ್ಯದರ್ಶಿ ಆರ್.ನಾರಾಯಣರೆಡ್ಡಿ ಶಿಬಿರ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಜೀವ ಉಳಿಸುವ ಅಮೂಲ್ಯ ವಸ್ತು ರಕ್ತವನ್ನು ತಯಾರು ಮಾಡಲು ಸಾಧ್ಯವಿಲ್ಲ. ಮಾನವೀಯ ಹೃದಯವುಳ್ಳ ಜನರು ಶ್ರೇಷ್ಠವಾದ ರಕ್ತದಾನಕ್ಕೆ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಪ್ರಾಂಶುಪಾಲೆ ಕೆ.ಶಾರದ ಮಾತನಾಡಿ ಕಾಲೇಜಿನಲ್ಲಿ 6 ತಿಂಗಳಿಗೊಮ್ಮೆ ವರ್ಷದಲ್ಲಿ 2ಬಾರಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 2 ಶಿಬಿರಗಳಿಂದ 328 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಪರವಾಗಿ ತಾಲ್ಲೂಕು ಕಾರ್ಯದರ್ಶಿ ನಾರಾಯಣರೆಡ್ಡಿ ರಕ್ತದಾನಿಗಳಿಗೆ, ಪ್ರಾಯೋಜಕರಾದ ಕಾಲೇಜಿನ ಪ್ರಾಂಶುಪಾಲರು ರೆಡ್ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಪಿ.ಆರ್.ನರಸಪ್ಪ ಹಾಗೂ ವಿವಿಧ ಘಟಕಗಳ ಸ್ವಯಂಸೇವಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ರೆಡ್ಕ್ರಾಸ್ ಶಾಖೆಯ ರಕ್ತನಿಧಿ ಮುಖ್ಯವೈದ್ಯಾಧಿಕಾರಿ ಡಾಹೇಮಂತ್ ರಾಜ್, ಸಿಬ್ಬಂದಿ ರವಿಲಂಬಾಣಿ, ನರಸಿಂಹಮೂರ್ತಿ, ಸ್ವಾಮಿ, ನಾಗೇಶ್, ರಾಗಿಣಿ, ಸುಹೇಲ್, ಬಾಲಾಜಿ, ಮಂಜುಳ, ಕಾಲೇಜಿನ ಡಾ.ಶಿವಪ್ರಸಾದ್, ಪ್ರೊ.ಕೆ.ಎನ್.ಕೃಷ್ಣಪ್ಪ, ಡಾ.ಎಂ.ಬಿ.ಬಾಲಸುಬ್ರಮಣ್ಯಂ, ಪ್ರೊ.ಎಸ್.ಎಂ.ವೆಂಕಟೇಶಪ್ಪ, ಆರ್.ಚಂದ್ರಶೇಖರ್, ವೆಂಕಟರೆಡ್ಡಿ, ಮಣಿಕಂಠ, ಟಿ.ಎಮ.ವೆಂಕಟೇಶಬಾಬು, ಶಿವಕುಮಾರ್, ಅಮರೇಶ್ ಭಾಗವಹಿಸಿದ್ದರು.