ಮಂಡ್ಯ: ಗ್ರಾಮಕ್ಕೆ ನೀರು ಪೂರೈಸುವ ಕೊಳವೆ ಬಾವಿ ಬಳಿ ವ್ಯಕ್ತಿಯೊಬ್ಬರು ಕೊಳವೆ ಬಾವಿ ಕೊರೆಯಿಸಿದ್ದು, ಅದನ್ನು ಮುಚ್ಚಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಜಯಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿದರು.
ಗ್ರಾಮಕ್ಕೆ ನೀರು ಪೂರೈಸುವ ಕೊಳವೆ ಬಾವಿಯ 20 ಅಡಿ ಅಂತರದಲ್ಲಿ ವ್ಯಕ್ತಿಯೊಬ್ಬರು ಕೊಳವೆಬಾವಿ ಕೊರೆಯಿಸಿರುವುದರಿಂದ ಗ್ರಾಮಕ್ಕೆ ನೀರು ಪೂರೈಸುವ ಕೊಳವೆಬಾವಿಯಲ್ಲಿ ಕಡಿಮೆ ನೀರು ಬರುತ್ತಿದೆ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು.
ಜನ, ಜಾನುವಾರುಗಳಿಗೆ ನೀರು ಒದಗಿಸುವ ಕೊಳವೆಬಾವಿ ಸಮೀಪ ಇರುವ ಕೊಳವೆಬಾವಿಯನ್ನು ಮುಚ್ಚಿಸುವ ಮೂಲಕ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಜೆ.ಎಸ್. ಶಿವಗಯ್ಯ, ಜೆ.ಬಿ. ಜಯರಾಮ್, ಜೆ.ಕೆ. ಕೃಷ್ಣ, ಜೆ.ಕೆ. ಚಿಕ್ಕಲಿಂಗಯ್ಯ, ಜವರೇಗೌಡ, ಬಿ. ಬಸವರಾಜು, ಶಂಕರಯ್ಯ, ಶಿವಪ್ಪ, ಪುಟ್ಟೇಗೌಡ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.