ರಾಮನಗರ: ತಾಲೂಕಿನ ಬಿಳಗುಂಬ ಗ್ರಾಮದಲ್ಲಿ ₹2.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹಾಲು ಶೀತಲೀಕರಣ ಘಟಕವನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಿ.ಮೋಹನ್ ಕುಮಾರ್ ಉದ್ಘಾಟಿಸಿದರು.
3.5 ಸಾವಿರ ಲೀಟರ್ ಹಾಲು ಸಂಗ್ರಹಣಾ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಇದರ ನಿರ್ಮಾಣಕ್ಕಾಗಿ ಬೆಂಗಳೂರು ಹಾಲು ಒಕ್ಕೂಟ ₹1.5 ಸಹಾಯಧನ ನೀಡಿದ್ದು, ಸ್ಥಳೀಯ ಸಹಕಾರ ಸಂಘವು ಉಳಿದ ವೆಚ್ಚ ಭರಿಸಿದೆ.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಿ.ಮೋಹನ್ ಕುಮಾರ್ ಮಾತನಾಡಿ, ‘ಹಾಲು ಉತ್ಪಾದಕರಿಗೆ ಸರ್ಕಾರ ಹೆಚ್ಚಿನ ಸಹಕಾರ ನೀಡಬೇಕು. ಬರಗಾಲದಿಂದ ತತ್ತರಿಸುತ್ತಿರುವ ಜಾನುವಾರುಗಳ ಉಳಿವಿಗೆ ಶೀಘ್ರದಲ್ಲೇ ಬಿಳಗುಂಬ ಗ್ರಾಮದಲ್ಲಿ ಮೇವು ಘಟಕ ತೆರೆಯಬೇಕು. ಮೇವು ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದರು.
ರಾಮನಗರ ಹಾಲು ಒಕ್ಕೂಟದ ಶಿವಶಂಕರ್ ಮಾತನಾಡಿ ‘ರಾಜ್ಯ ಸರ್ಕಾರ ನೀಡಿರುವ ಅನುದಾನವನ್ನು ಹಾಲು ಉತ್ಪಾದಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು.
ರೈತರು ತಮ್ಮ ರಾಸುಗಳನ್ನು ಬಲಿ ನೀಡಬಾರದು. ಬದಲಿಗೆ ಗೋಶಾಲೆಗಳ ಮೂಲಕ ಅವುಗಳ ಉಳಿವಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ಹಾಲು ಒಕ್ಕೂಟದ ಎ.ಎಂ. ಜಯರಾಮಯ್ಯ, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಶಿವರಾಜು, ತಮ್ಮಯ್ಯ, ಹೇಮಂತ್ ಕುಮಾರ್, ಎನ್.ಕಿರಣ್, ವಾಸು ಇತರರು ಇದ್ದರು.