ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಕಾವತಿ ನದಿಗೆ ಮತ್ತೆ ಬಂತು ಜೀವ!

Last Updated 23 ಮಾರ್ಚ್ 2017, 6:57 IST
ಅಕ್ಷರ ಗಾತ್ರ

ರಾಮನಗರ: ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಜನ–ಜಾನುವಾರುಗಳಿಗೆ ನೆರವಾಗುವ ಸಲುವಾಗಿ ಮಂಚನಬೆಲೆ ಜಲಾಶಯದಿಂದ ಅರ್ಕಾವತಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಬತ್ತಿ ಹೋದಂತೆ ಇರುವ ಅರ್ಕಾವತಿಗೆ ಮತ್ತೆ ಜೀವ ಬಂದಂತೆ ಆಗಿದೆ.

ಕಳೆದ 18ರಿಂದಲೇ ನದಿಗೆ ನೀರು ಹರಿಸಲಾಗುತ್ತಿದ್ದು, ಮಂಗಳವಾರ ರಾತ್ರಿಯಿಂದ ಈ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮಾಗಡಿ ತಾಲ್ಲೂಕಿನಲ್ಲಿ ಇರುವ ಜಲಾಶಯದಲ್ಲಿ ಮೂರು ಕ್ರೆಸ್ಟ್‌ ಗೇಟುಗಳಿದ್ದು, ಈ ಪೈಕಿ ಸದ್ಯ ಒಂದು ಗೇಟಿನ ಮೂಲಕ ನೀರು ಹೊರಹೋಗುತ್ತಿದೆ.

ಬೇಸಿಗೆಯಲ್ಲಿ ನದಿಯಲ್ಲಿ ನೀರು ಹರಿದಿರುವುದನ್ನು ಕಂಡು ಜನರು ಪುಳಕಗೊಂಡಿದ್ದಾರೆ. ಇದೊಂದು ಪ್ರವಾಸಿ ತಾಣವಾಗಿದ್ದು, ಜಲಾಶಯದ ಮುಂಭಾಗದ ನೀರಿನಲ್ಲಿ ಯುವಕ–ಯುವತಿಯರು ಮೀಯುತ್ತಾ ಖುಷಿ ಅನುಭವಿಸತೊಡಗಿದ್ದಾರೆ.

‘ಕಳೆದ 8ರಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಕಾವೇರಿ ನೀರಾವರಿ ನಿಗಮದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿತ್ತು. ರಾಮನಗರ ಹಾಗೂ ಮಾಗಡಿ ತಾಲ್ಲೂಕಿನ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗುವಂತೆ ನದಿಗೆ ನೀರು ಹರಿಸುವಂತೆ ಸ್ಥಳೀಯ ಶಾಸಕರು ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ 18ರಿಂದಲೇ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮದ ಮಂಚನಬೆಲೆ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ರವಿಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.


‘ಜಲಾಶಯದಲ್ಲಿ ಸದ್ಯ 0.7 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಇದರಲ್ಲಿ ಸದ್ಯ 50 ಎಂಸಿಎಫ್‌ಟಿಯಷ್ಟು ನೀರನ್ನು ನದಿಗೆ ಹರಿಸಲಾಗುವುದು. ಸದ್ಯ ನದಿಯ ನೀರು ಕೈಲಾಂಚವರೆಗೆ ತಲುಪಿರುವ ಮಾಹಿತಿ ಇದೆ. ಕನಕಪುರ ಪಟ್ಟಣಕ್ಕೆ ಸಮೀಪ ಮೈಸೂರು–ಬೆಂಗಳೂರು ಹೆದ್ದಾರಿಯ ಸೇತುವೆಯವರೆಗೆ ನೀರು ತಲುಪುವವರೆಗೂ ಜಲಾಶಯದಿಂದ ನೀರು ಬಿಡಲಾಗುವುದು. ಅದಕ್ಕೆ ಇನ್ನೂ ಎರಡು ದಿನ ಬೇಕಾಗಬಹುದು.

ನೀರು ಅಲ್ಲಿಗೆ ತಲುಪಿರುವುದು ಖಾತ್ರಿಯಾದ ಬಳಿಕ ಜಲಾಶಯದಿಂದ ನೀರಿನ ಹರಿವು ಸ್ಥಗಿತಗೊಳ್ಳಲಿದೆ. ಒಟ್ಟಾರೆ ಸುಮಾರು 55 ಕಿಲೋಮೀಟರ್ ದೂರದವರೆಗೂ ನದಿಯಲ್ಲಿ ನೀರು ಹರಿಯಲಿದೆ’ ಎಂದು ಅವರು ವಿವರ ನೀಡಿದರು.

ಜೂನ್‌ವರೆಗೂ ನೀರು: ‘ಬೇಸಿಗೆಯ ಹಿನ್ನೆಲೆಯಲ್ಲಿ ಸಚಿವರ ಆದೇಶದಂತೆ ಜೂನ್‌ ತಿಂಗಳವರೆಗೂ ಆಗಾಗ್ಗೆ ನದಿಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಪ್ರತಿ 15 ದಿನಕ್ಕೆ ಒಮ್ಮೆ ನೀರು ಬಿಡಲಾಗುವುದು. ಬೇಸಿಗೆಯ ಅವಧಿಯಲ್ಲಿ ಒಟ್ಟು 150 ಕ್ಯುಸೆಕ್‌ ನೀರು ಹರಿಸಲಾಗುವುದು’ ಎಂದು ಅವರು ವಿವರ ನೀಡಿದರು.

ಮೇವು ಬೆಳೆಯಲು ಅನುಕೂಲ: ನದಿಗೆ ನೀರು ಹರಿಸಿರುವುದರಿಂದ ಜಾನುವಾರುಗಳಿಗೆ ನೀರಿನ ಕೊರತೆ ತಕ್ಕ ಮಟ್ಟಿಗೆ ನೀಗಲಿದೆ. ಅಲ್ಲದೆ ನದಿಯ ಅಂಚಿನ ಜಮೀನುಗಳಲ್ಲಿ ಬೆಳೆದಿರುವ ಬೆಳೆ, ಮೇವಿಗೆ ಹೆಚ್ಚು ಉಪಯುಕ್ತವಾಗಲಿದೆ.

ಮಾಗಡಿಯ ಮಂಚನಬೆಲೆ ಗ್ರಾಮದಿಂದ ಹಿಡಿದು ರಾಮನಗರ ತಾಲ್ಲೂಕಿನ ದೇವರಸೇಗೌಡನ ದೊಡ್ಡಿಯವರೆಗೆ ಹಾಗೂ ಕೈಲಾಂಚ ಹೋಬಳಿಯಲ್ಲೂ ನದಿಯ ಸುತ್ತಲಿನ ಜಮೀನುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬೆಳೆಯಲಾಗುತ್ತಿದೆ. ನೀರಿನ ಲಭ್ಯತೆಯಿಂದಾಗಿ ಹಸಿರು ಮೇವು ಕಂಗೊಳಿಸಲಿದೆ. ಹೀಗಾಗಿ ಜಾನುವಾರುಗಳ ನಿರ್ವಹಣೆ ಸಮಸ್ಯೆಗೆ ತಕ್ಕ ಮಟ್ಟಿಗೆ ಪರಿಹಾರ ದೊರೆಯುವ ನಿರೀಕ್ಷೆ ಇದೆ.

ತಮಿಳುನಾಡಿಗೆ ನೀರು ಹರಿಸಿದ ವದಂತಿ!
ತಮಿಳುನಾಡಿಗೆ ನಿತ್ಯ ಎರಡು ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಮಂಚನಬೆಲೆ ಜಲಾಶಯದಿಂದ ಅರ್ಕಾವತಿ ನದಿಯ ಮೂಲಕ ನೆರೆಯ ರಾಜ್ಯಕ್ಕೆ  ನೀರು ಬಿಡಲಾಗುತ್ತಿದೆ ಎಂದು ವದಂತಿ ಹಬ್ಬಿದ್ದು, ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ‘ಜಿಲ್ಲೆಯ ಜನರ ಹಿತದೃಷ್ಟಿಯಿಂದ ಮಾತ್ರ ನದಿಗೆ ನೀರು ಬಿಡಲಾಗುತ್ತಿದೆ. ಕನಕಪುರ ಗಡಿಗೆ ನೀರು ತಲುಪುತ್ತಲೇ ಜಲಾಶಯದ ಕ್ರೆಸ್ಟ್‌ ಗೇಟುಗಳು ಬಂದ್ ಆಗಲಿವೆ. ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂಬುದು ಬರೀ ವದಂತಿ’ ಎಂದು ತಿಳಿಸಿದರು.

*
ಕಾವೇರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ನದಿಗೆ ನೀರು ಹರಿಸಲಾಗುತ್ತಿದ್ದು, ಬುಧವಾರದವರೆಗೂ ಮುಂದುವರಿಯಲಿದೆ. ಬೇಸಿಗೆ ಅವಧಿಯಲ್ಲಿ 15 ದಿನಕ್ಕೊಮ್ಮೆ ಜಲಾಶಯದಿಂದ ನೀರು ಬಿಡಲು ನಿರ್ಧರಿಸಲಾಗಿದೆ.
-ಎಂ. ರವಿಶಂಕರ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಕಾವೇರಿ ನೀರಾವರಿ ನಿಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT