ಧಾರವಾಡ ಹೈಕೋರ್ಟ್ ಪೀಠದದಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ ಚಂದಾಲಿಂಗೇಶ್ವರ ದೇವಸ್ಥಾನ ಹಾಗೂ ಗಂಗ ಮಾಳಮ್ಮ ದೇವಸ್ಥಾನಗಳನ್ನು ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ತಹಶೀಲ್ದಾರ್ ಗಂಗಪ್ಪ ತಿಳಿಸಿದರು.
ಎರಡೂ ದೇವಸ್ಥಾನಗಳನ್ನು ಸರ್ಕಾರ ವಶಕ್ಕೆ ಪಡೆದಿರುವುದರಿಂದ ದೇವಸ್ಥಾನದ ಧಾರ್ಮಿಕ ಕಾರ್ಯಕ್ಕೆ ತೊಂದರೆ ಆಗಬಾರದು ಎನ್ನುವ ಉದ್ದೇಶವಿದೆ. ಈ ಬಗ್ಗೆ ಗ್ರಾಮಸ್ಥರು ಅಭಿಪ್ರಾಯ ತಿಳಿಸಬೇಕು ಎಂದು ತಹಶೀಲ್ದಾರ್ ಕೇಳಿದರು.
‘ಮನ್ನೇರಾಳದ ಮುಖಂಡರು ನಾವೇ ಪೂಜೆ ನೆರವೇರಿಸುತ್ತೇವೆ. ನಮಗೆ ಪೂಜೆ ನಡೆಸಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಬೀಳಗಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ‘ತಮ್ಮ ಗ್ರಾಮದಲ್ಲೂ ಪೂಜಾರಿಗಳಿದ್ದಾರೆ. ಅವರಿಗೆ ವಹಿಸಿ’ ಎಂದರು.
ಒಮ್ಮತ ಮೂಡದ ಕಾರಣ ಎರಡು ಗ್ರಾಮ ಹೊರತುಪಡಿಸಿ ಚಂದ್ರಗಿರಿ ಗ್ರಾಮದ ಐವರು ಪೂಜಾರಿಗಳ ನೇಮಿಸಿಕೊಳ್ಳಲು ತಹಶೀಲ್ದಾರ್ ತೀರ್ಮಾನಿಸಿದರು. ಇದಕ್ಕೆ ಉಭಯ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು.
‘ದೇವರ ಹುಂಡಿಯಲ್ಲಿರುವ ಕಾಣಿಕೆ ಸರ್ಕಾರದ ಸ್ವತ್ತು. ಆರತಿತಟ್ಟೆಯಲ್ಲಿ ಬರುವ ಕಾಣಿಕೆ ಪೂಜಾರಿ ಸ್ವತ್ತು. ಎಲ್ಲ ಸ್ಥಿರ, ಚರಾಸ್ತಿಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ವರದಿ ನೀಡಲಾಗುವುದು’ ಎಂದು ತಹಶೀಲ್ದಾರ್ ಗಂಗಪ್ಪ ತಿಳಿಸಿದರು. ಉಪ ತಹಶೀಲ್ದಾರ್ ಖಾಜಾಹುಸೇನ ನಾಡಗೌಡರ, ಕಂದಾಯ ನಿರೀಕ್ಷಕ ಮಹಮ್ಮದ ಮುಸ್ತಫಾ, ಸಿಪಿಐ ಗೀರೀಶ ರೋಡ್ಕರ, ಎಸ್ಐ ವಿಶ್ವನಾಥ ಹಿರೇಗೌಡ್ರ, ಮನ್ನೇರಾಳ ಬೀಳಗಿ ಗ್ರಾಮದ ಮುಖಂಡರು ಇದ್ದರು.