ಹುಬ್ಬಳ್ಳಿ: ಲೀಡರ್ಸ್ ಎಕ್ಸ್ಲ್ರೇಟಿಂಗ್ ಡೆವಲಪ್ಮೆಂಟ್ ಪ್ರೋಗ್ರಾಮ್ ಹಾಗೂ ದೇಶಪಾಂಡೆ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ವಿದ್ಯಾರ್ಥಿಗಳು ಬಿರು ಬೇಸಿಗೆಯಲ್ಲಿ ನೀರಿಗಾಗಿ ಬಳಲುತ್ತಿರುವ ಹಕ್ಕಿಗಳಿಗೆ ಹುಬ್ಬಳ್ಳಿ ನಗರದಲ್ಲಿ ನೀರುಣಿ ಸುವ ಕಾಯಕದಲ್ಲಿ ತೊಡಗಿದರು.
30 ವಿದ್ಯಾರ್ಥಿಗಳ ತಂಡ ತಮ್ಮ ತರಗತಿಯ ಬಿಡುವಿನ ಸಮಯದಲ್ಲಿ ನೀರನ್ನು ಪ್ಲಾಸ್ಟಿಕ್ ಬಾಟಲಿ ಮೂಲಕ ಮರಕ್ಕೆ ನೇತು ಹಾಕಿ ಬಸವಳಿದ ಬಾನಾಡಿಗಳಿಗೆ ದಾಹ ನೀಗಿಸುವ ಕೆಲಸ ಮಾಡಿದರು.
ಕಾರ್ಯಕ್ರಮ ಸಂಯೋಜಕ ಅಭಿನಂದನ ಕವ್ವಾಳೆ ಮಾತನಾಡಿ ‘ಬೇಸಿಗೆಯಲ್ಲಿ ಮನುಷ್ಯನೇ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಇನ್ನು ಹಕ್ಕಿಗಳ ಪಾಡು ಕೇಳುವಂತಿಲ್ಲ. ಪರಿಸರ ರಕ್ಷಣೆ ಹಾಗೂ ಪಕ್ಷಿ ಸಂಕುಲಗಳ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂದರು.
ಕಾರ್ಯಕ್ರಮ ಸಂಯೋಜಕ ರಾಕೇಶ ತೋಟಕರ ಮಾತನಾಡಿ ‘ಸುಮಾರು 30 ಜನರ ಐದು ತಂಡ ನಗರದಲ್ಲಿ 250ಕ್ಕೂ ಹೆಚ್ಚು ಕಡೆಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಮೂಲಕ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿವೆ. ಈ ಅಭಿಯಾನ ವನ್ನು ನಿರಂತರವಾಗಿ ಒಂದು ತಿಂಗಳು ಮುಂದುವರಿಸಲಾಗುವುದು’ ಎಂದರು.