ಜಮಖಂಡಿ: ಇಂಗ್ಲಿಷ್ ಭಾಷೆಯ ವ್ಯಾಮೋಹ ಮತ್ತು ಗೀಳಿನಿಂದಾಗಿ ನಮ್ಮ ಮಾತೃ ಭಾಷೆಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಸಿದ್ದು ನ್ಯಾಮಗೌಡ ಹೇಳಿದರು.
ಕರ್ನಾಟಕ ಉರ್ದು ಅಕಾಡೆಮಿ ಆಶ್ರಯದಲ್ಲಿ ಇಲ್ಲಿನ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮಾತೃ ಭಾಷೆಯ ಮೇಲೆ ಹಿಡಿತ ಸಾಧಿಸುವವರು ಇತರ ಭಾಷೆಗಳ ಮೇಲು ಹಿಡಿತ ಸಾಧಿಸಬಲ್ಲರು. ಉರ್ದು, ಸಂಸ್ಕೃತ. ಕನ್ನಡ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ, ಅವುಗಳ ಮಹತ್ವ ಕುರಿತು ಅರಿವು ಮೂಡಿಸಲು ಸಾಧ್ಯವಾಗುತ್ತಿಲ್ಲ ಎಂದರು. ಉರ್ದು ಅಕಾಡೆಮಿಯ ಸಂಚಾಲಕ ಮೊಹಮ್ಮದ ಅಶ್ಪಾಕ್ ಸಿದ್ಧಿಕಿ ಮಾತನಾಡಿದರು.
ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ ಉಪಾಧ್ಯಕ್ಷ ನಜೀರ್ ಕಂಗನೊಳ್ಳಿ, ಅಂಜುಮನ್–ಎ–ಇಸ್ಲಾಂ ಕಮಿಟಿ ಅಧ್ಯಕ್ಷ ಜಾಕೀರ್ ನದಾಫ, ಉದ್ಯಮಿದಾರ ಮಾಮೂನ ಪಾರ್ಥನಳ್ಳಿ, ಮೌಲಾನಾ ಶಾಕೀರಹುಸೇನ ಕಾಸ್ಮಿ, ಮುಫ್ತಿ ಮೊಹಮ್ಮದ ಯೂನುಸ್ ನಕ್ವಿ, ಮುಂಬಯಿ ವಿವಿ ಡಾ.ಖಮರ ಸಿದ್ಧಕಿ, ಸವನೂರಿನ ಡಾ.ಶಾಹ ರಷದ ಉಸ್ಮಾನಿ, ವಿಜಯಪುರ ಪ್ರೊ.ಸಯ್ಯದ ದಸ್ತಗೀರ ಪಾಷಾ, ಬೀದರನ ಫಜನಫರ್ ಇಕ್ಬಾಲ್ ಮತ್ತಿತರರು ಹಾಜರಿದ್ದರು.