‘ಅಜರಾಮರ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣಪತ್ರ ಪಡೆದಿರುವ ಈ ಚಿತ್ರ ಮುಂದಿನ ವಾರ (ಮಾರ್ಚ್ 31) ತೆರೆಗೆ ಬರಲಿದೆ.
ಸಿನಿಮಾ ಸೆಟ್ಟೇರುವಾಗ ಚಿತ್ರದ ಮೇಲಿದ್ದ ನಿರ್ದೇಶಕ ರವಿಕಾರಂಜಿ ಅವರ ವಿಶ್ವಾಸ ಈಗ ದುಪ್ಪಟ್ಟಾಗಿದೆ. ಪ್ರತಿಭಾವಂತ ಹುಡುಗನೊಬ್ಬ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಶ್ರಮಪಡುತ್ತಿರುವಾಗ ಒಬ್ಬ ಹುಡುಗಿ ಆತನ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಆತನ ಕೆಲಸ ಅಜರಾಮರ ಆಗುತ್ತದೆ ಎಂದು ಹೇಳುವ ಮೂಲಕ ಶೀರ್ಷಿಕೆಗೂ ನ್ಯಾಯ ಸಲ್ಲಿಸುವ ಪ್ರಯತ್ನ ನಿರ್ದೇಶಕರದ್ದು. ಅವರಿಗಿದು ನಿರ್ದೇಶನದ ಮೊದಲ ಅನುಭವ.
ಮಾಡೆಲಿಂಗ್ ಲೋಕದಿಂದ ಸಿನಿಮಾಕ್ಕೆ ಕಾಲಿಟ್ಟ ತಾರಕ್ ಚಿತ್ರದ ನಾಯಕ. ಚಿತ್ರಕ್ಕಾಗಿ ಕಾರ್ಯಾಗಾರ ಮಾಡಿ ಸಕಲ ಸಿದ್ಧತೆ ನಡೆಸಿಯೇ ಚಿತ್ರೀಕರಣಕ್ಕೆ ತೆರಳಿದ್ದಾಗಿ ಅವರು ಹೇಳಿದರು. ಮಧ್ಯಮ ವರ್ಗದ, ಸ್ವತಂತ್ರ ಆಲೋಚನೆಯ ಹುಡುಗಿಯಾಗಿ ಪಾತ್ರ ನಿರ್ವಹಿಸಿದ್ದಾರೆ ರೋಷಿಣಿ. ‘ಪ್ರೇಕ್ಷಕನಿಗೆ ಹತ್ತಿರವಾಗುವ ಮತ್ತು ಕಥೆಗೆ ಬೇಕಿರುವ ಅಂಶಗಳು ಚಿತ್ರದಲ್ಲಿದೆ’ ಎಂದರು ಅವರು.
ತಾರಕ್ಗೆ ಒಳ್ಳೆಯ ಭವಿಷ್ಯವಿದೆ ಎಂದು ಹೇಳಿದ ಛಾಯಾಗ್ರಾಹಕ ಮನೋಹರ್, ‘ಸ್ಟಾರ್ ನಟನಾದ ನಂತರ ತನ್ನದೇ ಗುಂಪು ಕಟ್ಟಿಕೊಳ್ಳುವುದು, ತನಗಾಗಿ ಕಥೆಯನ್ನೇ ಬದಲಾಯಿಸುವಂಥ ಮನೋಧರ್ಮ ಬೆಳೆಯುತ್ತಿದೆ. ನೀನು ಆ ಸಾಲಿಗೆ ಸೇರಬೇಡ’ ಎಂದು ಕಿವಿಮಾತು ಹೇಳಿದರು.
‘ಅಜರಾಮರ’ ಚಿತ್ರದ ಮೂಲಕ ಮೊದಲ ಬಾರಿ ಸಿನಿಮಾ ನಿರ್ಮಾಣಕ್ಕೆ ತೊಡಗಿದ್ದಾರೆ ಡೇವಿಡ್ ಬಾಂಜಿ. ‘ಬೇಸರ ತರಿಸದ ವಿಭಿನ್ನ ಕಥೆ, ನಿರೂಪಣೆ ಇರುವ ಸಂಪೂರ್ಣ ಮನಂಜನಾ ಚಿತ್ರ ನಮ್ಮದು’ ಎಂದರು ಡೇವಿಡ್. ಸಹನಿರ್ಮಾಪಕ ಅಭಯ್ ಗಂಜ್ಯಾಳ್ ಪ್ರಕಾರ ‘ಅಜರಾಮರ’ ನವರಸಗಳನ್ನೂ ಒಳಗೊಂಡಿರುವ ಚಿತ್ರ.
ಗ್ರಾಫಿಕ್ಸ್ ಸಹಾಯದಿಂದ ಡ್ರ್ಯಾಗನ್ ತೋರಿಸಲು ಹೊರಟಿದ್ದಾರೆ ನಿರ್ದೇಶಕರು. ರಾಜ್ಕಿಶೋರ್ ರಾವ್ ರಾಗ ಸಂಯೋಜನೆ, ಪ್ರದೀಪ್ ವರ್ಮಾ ಹಿನ್ನೆಲೆ ಸಂಗೀತ, ಎನ್.ಎಂ. ವಿಶ್ವ ಸಂಕಲನ ಚಿತ್ರಕ್ಕಿದೆ. ರಮೇಶ್ ಭಟ್, ಸುಚೇಂದ್ರ ಪ್ರಸಾದ್, ಮಿತ್ರ, ರಾಕ್ಲೈನ್ ಸುಧಾಕರ್, ಪ್ರಶಾಂತ ಸಿದ್ಧಿ ತಾರಾಗಣದಲ್ಲಿರುವ ಪ್ರಮುಖರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.