ಶರಾವತಿ ಕುರಿತ ಟೀಕೆ ಇನ್ನು ನಿಲ್ಲಲಿ: ನಿಜಲಿಂಗಪ್ಪ
ಬೆಂಗಳೂರು, ಮಾ. 23– ‘ಶರಾವತಿಯ ಮೇಲಿನ ಕೊನೆ ಮೊದಲಿಲ್ಲದ ಟೀಕೆಗಳು ಇಂದಿಗೆ ನಿಲ್ಲಬೇಕು. ಯಾವುದೂ ಹಣ ದುರುಪಯೋಗವಾಗಿಲ್ಲ’ ಎಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.
ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುತ್ತಿದ್ದ ಮುಖ್ಯಮಂತ್ರಿಗಳು ‘ಶರಾವತಿ ಯೋಜನೆ ಮೇಲಿನ ಮಾತುಗಳು, ಟೀಕೆಗಳು ನಮ್ಮಲ್ಲೇನಿಲ್ಲಲಿಲ್ಲ.
ಕೆಲವರು ಸದಸ್ಯರು (ವಿರೋಧ ಪಕ್ಷದವರೂ ಹಾಗೂ ಕೆಲವರು ಕಾಂಗ್ರೆಸ್ಸಿಗರು) ಶರಾವತಿಯೂ ಒಂದಾಗಿದ್ದ 24 ಆಪಾದನೆಗಳನ್ನು ಪಟ್ಟಿ ಮಾಡಿ ಕೇಂದ್ರಕ್ಕೆ ಕಳುಹಿಸಿದರು. ಅವರು ಅದರಲ್ಲಿ ಏನೂ ಹುರುಳಿಲ್ಲ ಎಂದು ತೀರ್ಮಾನ ಮಾಡಿದ್ದಾರೆ. ಪುನಃ ಪುನಃ ಅದನ್ನು ಎತ್ತುವುದರಲ್ಲಿ ಅರ್ಥವಿಲ್ಲ’ ಎಂದು ಖಚಿತಪಡಿಸಿದರು.
ಎಚ್.ಎಂ.ಟಿ.ಯ ಮೂರು ಕೋಟಿ ರೂ. ಬೆಲೆ ಯಂತ್ರಗಳು ಮಾರುಕಟ್ಟೆ ಇಲ್ಲದೆ ಉಳಿದಿವೆ
ನವದೆಹಲಿ, ಮಾ. 23– ಬೇಡಿಕೆ ಕಡಿಮೆಯಾಗಿರುವುದರಿಂದ ಬೆಂಗಳೂರಿನ ಹಿಂದೂಸ್ತಾನ್ ಮೆಷಿನ್ಟೂಲ್ಸ್ ಸಂಸ್ಥೆಯಲ್ಲಿ 3.5 ಕೋಟಿ ರೂ. ಬೆಲೆಯ ಯಂತ್ರೋಪಕರಣಗಳು ಮಾರಾಟವಾಗದೆ ಉಳಿದುಕೊಂಡಿವೆಯೆಂದೂ ಕೈಗಾರಿಕಾಭಿವೃದ್ಧಿ ಸಚಿವ ಫಕ್ರುದ್ದಿನ್ ಆಲಿ ಅಹಮದ್ರವರು ರಾಜ್ಯಸಭೆಯಲ್ಲಿ ತಿಳಿಸಿದರು.
ಸಿ.ಐ.ಎ. ಮೇಲಿನ ಆರೋಪ: ಬುಡಮಟ್ಟ ಶೋಧನೆ ನಡೆಸುವುದಾಗಿ ಚಾಗಲಾ
ನವದೆಹಲಿ, ಮಾ. 23– ಅಮೆರಿಕದ ಕೇಂದ್ರ ಗೂಢಚರ್ಯೆ ಸಂಸ್ಥೆಯ (ಸಿ.ಐ.ಎ.) ಹಣವನ್ನು ಆಕ್ಷೇಪಣಾರ್ಹ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದೆಯೆಂಬುದನ್ನು ಸರ್ಕಾರವು ಬುಡಮಟ್ಟ ಶೋಧಿಸುವುದಾಗಿ ವಿದೇಶಾಂಗ ಸಚಿವ ಶ್ರೀ ಎಂ.ಸಿ. ಚಾಗಲಾ ರಾಜ್ಯ ಸಭೆಯಲ್ಲಿ ಭರವಸೆ ನೀಡಿದರು.