ಬೆಂಗಳೂರು: ‘ಎಲ್.ಕೆ. ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಿದ ನೀವು ಎಸ್.ಎಂ. ಕೃಷ್ಣ ಅವರಿಗೆ ಇನ್ನೇನು ಉಪದ್ರವ ನೀಡುತ್ತೀರೊ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು.
ವಿಧಾನ ಪರಿಷತ್ತಿನಲ್ಲಿ ಬಜೆಟ್ ಭಾಷಣದ ಮೇಲೆ ಮಾತನಾಡಿದ ಬಿಜೆಪಿಯ ಲಹರ್ಸಿಂಗ್ ಸಿರೋಯ ಅವರು ಕೃಷ್ಣ ಬೈರೇಗೌಡ ಅವರತ್ತ ನೋಡಿ, ‘ನಿಮ್ಮ ನಾಯಕರು ನಿಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಬೇಸರವಾಗಿರಬೇಕು’ ಎಂದು ಕೆಣಕಿದರು.
ತಕ್ಷಣ ಎದ್ದುನಿಂತ ಕೃಷ್ಣ ಬೈರೇಗೌಡ, ‘ಈ ದೇಶದಲ್ಲಿ ಬಿಜೆಪಿ ಕಟ್ಟಿದವರ ಪೈಕಿ ಎಲ್.ಕೆ. ಅಡ್ವಾಣಿ ಪ್ರಮುಖರು. ಅವರನ್ನೇ ಮೂಲೆಗುಂಪು ಮಾಡಿದ್ದೀರಿ. ಪಕ್ಷಕ್ಕಾಗಿ ಇಷ್ಟು ವರ್ಷ ಶ್ರಮಿಸಿದ್ದರೂ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕನಿಷ್ಠ ತಾರಾ ಪ್ರಚಾರಕ ಆಗಲಿಲ್ಲ. ಇನ್ನು ಎಸ್.ಎಂ. ಕೃಷ್ಣ ಅವರಿಗೆ ಇನ್ನೇನು ಕಾದಿದೆಯೊ’ ಎಂದು ವ್ಯಂಗ್ಯವಾಡಿದರು.
ಇದರಿಂದ ಸಿಟ್ಟಿಗೆದ್ದ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ‘ಅಡ್ವಾಣಿ ಅವರನ್ನು ಚೆನ್ನಾಗಿ ನೋಡಿಕೊಂಡರೆ ನಿಮಗೆ ಸಮಾಧಾನವೇ ಅಥವಾ ಕೃಷ್ಣ ಬಿಜೆಪಿಗೆ ಬಂದಿದ್ದಕ್ಕೆ ಅಸಮಾಧಾನವೇ ಸ್ಪಷ್ಟಪಡಿಸಿ. ಅಡ್ವಾಣಿ ಅವರು ಇವತ್ತಿಗೂ ನಮಗೆ ಮಾರ್ಗದರ್ಶಕರು. ಅವರನ್ನು ಚೆನ್ನಾಗಿಯೇ ನೋಡಿಕೊಂಡಿದ್ದೇವೆ’ ಎಂದರು.
‘ಮುಖ್ಯಮಂತ್ರಿ, ರಾಜ್ಯಪಾಲ, ವಿದೇಶಾಂಗ ಸಚಿವ ಆಗಿದ್ದ ಕೃಷ್ಣ ಅವರನ್ನು ಕಾಂಗ್ರೆಸ್ ಬದಿಗೆ ತಳ್ಳಿತ್ತು. ಅವರ ಅನುಭವ ಬಳಸಿಕೊಂಡು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ನಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ’ ಎಂದು ಈಶ್ವರಪ್ಪ ವಿವರಿಸಿದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ‘ಕರ್ನಾಟಕದಲ್ಲಿ ಜನಸಂಘ ಕಟ್ಟಿದವರು ಎ.ಕೆ. ಸುಬ್ಬಯ್ಯ. ಈಗ ಅವರು ಎಲ್ಲಿದ್ದಾರೆ ಎಂದು ನಿಮಗೆ ನೆನಪಿಲ್ಲ. ಬಿಜೆಪಿಯಿಂದಲೂ ಅನೇಕರು ಹೊರಗೆ ಹೋಗಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಇದು ಸಾಮಾನ್ಯ’ ಎಂದರು.