ಬೆಂಗಳೂರು: ‘ಕೈಗಾರಿಕಾ ಸಚಿವ ಆರ್. ದೇಶಪಾಂಡೆ ಅವರ ಪತ್ನಿ ರಾಧಾ ದೇಶಪಾಂಡೆ ಅವರು ಬಾಕಿ ಉಳಿಸಿಕೊಂಡಿದ್ದ ₹1.5 ಲಕ್ಷ ಕಾರ್ಮಿಕ ಸೆಸ್ ಹಣ ಪಾವತಿಸಿದ್ದಾರೆ’ ಎಂದು ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ರಾಜು ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಲೀಕರು ಕಟ್ಟಡದ ಕಾಮಗಾರಿ ವೆಚ್ಚದಲ್ಲಿ ಶೇ 1 ರಷ್ಟು ಸೆಸ್ ಹಣವನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಪಾವತಿಸಬೇಕು.
ಆದರೆ, ರಾಧಾ ಅವರು ಸರ್ವೆ ನಂ 36/37 ರಲ್ಲಿ ಜಕ್ಕೂರು ಪ್ಲಾಂಟೇಷನ್ ಬಳಿ 2006ರಲ್ಲಿ ನಿರ್ಮಿಸಿದ್ದ ಮನೆಗೆ ಕಾರ್ಮಿಕ ಸೆಸ್ ಕಟ್ಟಿರಲಿಲ್ಲ. ಇದರ ಮಾಹಿತಿ ನೀಡುವಂತೆ ಆರ್ಟಿಐ ಅಡಿ ಅರ್ಜಿ ಸಲ್ಲಿಸಿದ್ದೆ. ಆದರೆ, ಮಾಹಿತಿ ನೀಡಿರಲಿಲ್ಲ. ಹೀಗಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆ ಬಳಿಕ ಪಾವತಿ ಮಾಡಿದ್ದಾರೆ’ ಎಂದರು.