ಬೆಂಗಳೂರು: ಕಿಂಗ್ಫಿಷರ್, ಗ್ರೇ ಶ್ರೈಕ್, ಗೋಲ್ಡನ್ ಓರಿಯಲ್, ಪರ್ಪಲ್ ಮೊರೇನ್, ರೋಜಿ ಸ್ಟಾರ್ಲಿಂಗ್, ಸನ್ಬರ್ಡ್, ಪೆಲಿಕಾನ್, ಜಕಾನಾ, ಗುಬ್ಬಚ್ಚಿ, ಮುನಿಯಾ, ನೀರುಕೋಳಿ, ಬಾತುಕೋಳಿ, ಕೊಕ್ಕರೆ, ಹದ್ದು ಸೇರಿದಂತೆ ಹತ್ತಾರು ಪ್ರಭೇದದ ಪಕ್ಷಿಗಳನ್ನು ನೋಡಲು ನಗರದ ನಾಗರಿಕರು ಪಕ್ಷಿಧಾಮಕ್ಕೆ ಹೋಗಬೇಕಿಲ್ಲ.
ನಗರದಲ್ಲಿನ ಯಡಿಯೂರು ಕೆರೆಯನ್ನು ಈ ಹಕ್ಕಿಗಳು ಆವಾಸ ಸ್ಥಾನ ಮಾಡಿಕೊಂಡಿವೆ. ಕೆರೆಯನ್ನು ಪಕ್ಷಿಧಾಮವಾಗಿಸಲು ಬಿಬಿಎಂಪಿ ‘ಬಾನಾಡಿ ಮರಳಿ ಬಾ ಗೂಡಿಗೆ’ ಯೋಜನೆ ಅನುಷ್ಠಾನಗೊಳಿಸಿದೆ.
₹ 25 ಲಕ್ಷ ವೆಚ್ಚದಲ್ಲಿ ಪಕ್ಷಿಗಳ ಆಹಾರ ಮತ್ತು ಆವಾಸಕ್ಕೆ ಬೇಕಾದ ಅನುಕೂಲತೆಗಳನ್ನು ಕೆರೆಯ ಪರಿಸರದಲ್ಲಿ ಕಲ್ಪಿಸಲಾಗಿದೆ. ಪಕ್ಷಿಗಳ ವಾಸಕ್ಕಾಗಿ ವಿಶೇಷ ಗೋಡೆಯೊಂದನ್ನು ಕಟ್ಟಲಾಗಿದೆ.
ಮರಿಗಳನ್ನು ಪೋಷಿಸಲು ಅದರಲ್ಲಿ ಹತ್ತಾರು ಕೃತಕ ಪೊಟರೆಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಪೊಟರೆಗಳುಳ್ಳ 2 ಗೋಪುರಗಳನ್ನು ನಿರ್ಮಿಸಲಾಗಿದೆ.
ಸಂತಾನ ವೃದ್ಧಿಗಾಗಿ ಶ್ರೀಲಂಕಾ, ನೇಪಾಳ, ಹಿಮಾಲಯ, ಕಾಶ್ಮೀರದಿಂದ ಹಕ್ಕಿಗಳು ವಲಸೆ ಬರುತ್ತಿವೆ. ಕೆರೆಯ ದಡದಲ್ಲಿ ನಿರ್ಮಿಸಿರುವ ದೊಡ್ಡ ಪಂಜರಗಳಲ್ಲಿ ಗಿಳಿ, ಪಾರಿವಾಳ ಮತ್ತು ಮೊಲಗಳನ್ನು ಇರಿಸಲಾಗಿದೆ.