ನವದೆಹಲಿ: ಏರ್ ಇಂಡಿಯಾ ಮ್ಯಾನೇಜರ್ಗೆ ಚಪ್ಪಲಿಯಿಂದ ಹೊಡೆದ ಪ್ರಕರಣ ಸಂಬಂಧ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಅವರನ್ನು ಏರ್ ಇಂಡಿಯಾ ಸಂಸ್ಥೆಯು ಪ್ರಯಾಣಿಕರ ನಿಷೇಧದ ಪಟ್ಟಿಗೆ ಸೇರಿಸಿದೆ. ಇದರ ಬೆನ್ನಲ್ಲೇ ನಾಲ್ಕು ಖಾಸಗಿ ವಿಮಾನಯಾನ ಸಂಸ್ಥೆಗಳು ರವೀಂದ್ರ ಅವರ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಿವೆ.
ಮಹಾರಾಷ್ಟ್ರದ ಉಸ್ಮಾನಾಬಾದ್ ಕ್ಷೇತ್ರದ ಸಂಸದ ರವೀಂದ್ರ ಅವರು ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಏರ್ ಇಂಡಿಯಾದ ಮ್ಯಾನೇಜರ್ ಶಿವಕುಮಾರ್ (60) ಅವರಿಗೆ ಚಪ್ಪಲಿ ಯಿಂದ 25 ಬಾರಿ ಹೊಡೆದಿದ್ದಲ್ಲದೆ ಅವರ ಅಂಗಿಯನ್ನು ಹರಿದು ಹಾಕಿ ಕನ್ನಡಕ ಒಡೆದು ಹಾಕಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಏರ್ ಇಂಡಿಯಾ ರವೀಂದ್ರ ಅವರ ವಿರುದ್ಧ ದೂರು ದಾಖಲಿಸಿದೆ.
ಫೆಡರೇಷನ್ ಆಫ್ ಇಂಡಿಯನ್ ಏರ್ಲೈನ್ಸ್ನ ಸದಸ್ಯರಾದ ಜೆಟ್ ಏರ್ವೇಸ್, ಇಂಡಿಗೋ, ಸ್ಪೇಸ್ ಜೆಟ್ ಮತ್ತು ಗೋಏರ್ ಸಂಸ್ಥೆಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ರವೀಂದ್ರ ಗಾಯಕ್ವಾಡ್ ಅವರಿಗೆ ತಮ್ಮ ಸಂಸ್ಥೆಯ ವಿಮಾನಗಳಲ್ಲಿ ಪ್ರಯಾಣಕ್ಕೆ ನಿಷೇಧ ಹೇರಿವೆ ಎಂದು ಎಫ್ಐಎಯ ಮೂಲಗಳು ತಿಳಿಸಿವೆ.
ಘಟನೆ ವಿವರ: ರವೀಂದ್ರ ಅವರು ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದರು. ಪುಣೆಯಿಂದ ನವದೆಹಲಿಗೆ ತುರ್ತಾಗಿ ಹೋಗಬೇಕಿದ್ದರಿಂದ ಎಕಾನಮಿ ಕ್ಲಾಸ್ ವಿಮಾನ ವೇರಿದ್ದರು. ವಿಮಾನ ನಿಲ್ದಾಣಕ್ಕೆ ‘ಎಐ 852’ ವಿಮಾನ ಬಂದು ನಿಂತು ಒಂದು ಗಂಟೆ ಆದರೂ ತಮ್ಮ ಆಸನಬಿಟ್ಟು ಕದಲದೇ ಕುಳಿತಿದ್ದರು.
ಆಗ ಬಂದ ಏರ್ ಇಂಡಿಯಾ ಮ್ಯಾನೇಜರ್ ಶಿವಕುಮಾರ್, ವಿಮಾನವನ್ನು ಮತ್ತೊಂದು ಪ್ರಯಾಣಕ್ಕೆ ಸಜ್ಜುಗೊಳಿಸಬೇಕಿದ್ದು, ಹೊರ ಹೋಗುವಂತೆ ಸಂಸದರಿಗೆ ತಿಳಿಸಿದರು. ಇದರಿಂದ ಆಕ್ರೋಶಗೊಂಡ ರವೀಂದ್ರ ಹಲ್ಲೆ ನಡೆಸಿದ್ದಾರೆ.
‘ನನ್ನ ಬಳಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಇದ್ದರೂ ಎಕಾನಮಿ ಕ್ಲಾಸ್ನಲ್ಲಿ ಪ್ರಯಾಣ ಮಾಡುವಂತೆ ಏರ್ ಇಂಡಿಯಾ ಸಿಬ್ಬಂದಿ ಒತ್ತಾಯ ಮಾಡಿದರು. ನನ್ನನ್ನೇ ಯಾರು ಈ ಸಂಸದ ಎಂದು ಸಿಬ್ಬಂದಿ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡುವುದಾಗಿ ಹೇಳಿದರು.
ನಾನು ಬಿಜೆಪಿಯ ಸಂಸದ ಅಲ್ಲ, ಶಿವಸೇನಾ ಸಂಸದ. ಯಾವುದೇ ಅವಮಾನ ಸಹಿಸುವುದಿಲ್ಲ. ಹಲ್ಲೆ ನಡೆಸಿದ್ದಕ್ಕೆ ಕ್ಷಮೆಯಾಚಿಸುವುದಿಲ್ಲ’ ಎಂದರು.
‘ನನ್ನೊಂದಿಗೆ ವಿಮಾನದ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದರು’ ಎಂದು ಅವರು ಆರೋಪಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಏರ್ ಇಂಡಿಯಾ ತಂಡವೊಂದನ್ನು ರಚಿಸಿದ್ದು, ವರದಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಸಲ್ಲಿಸಲಿದೆ. ಅಲ್ಲದೆ ರವೀಂದ್ರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.