ಬೀಳಗಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಬರುವ ಎಡರು ತೊಡರುಗಳನ್ನು ಸವಾಲಾಗಿ ಸ್ವೀಕರಿಸುವಂತಹ ಸ್ಪರ್ಧಾತ್ಮಕ ಮನೋಭಾವನೆಯನ್ನು ಯುವಜನತೆ ಬೆಳೆಸಿಕೊಳ್ಳಬೇಕು. ಗುರಿ ಸಾಧನೆಗೆ ನಿರಂತರ ಶ್ರಮ, ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದು ರಾಮಲಿಂಗೇಶ್ವರ ಸಹಕಾರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಸವರಾಜ ಖೋತ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಮ್ಯಾಂಡಮಸ್ ಎಜುಕೇಶನ್ ಅಕಾಡೆಮಿ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಕ್ಷೇತ್ರವಿರಲಿ, ಪೈಪೋಟಿಗಿಳಿದಾಗಲೇ ನಮ್ಮ ಸಾಮರ್ಥ್ಯದ ಅರಿವು ನಮಗಾಗುತ್ತದೆ. ಗೆಲ್ಲಲೇ ಬೇಕೆಂಬ ಛಲ, ನಿರಂತರ ಪ್ರಯತ್ನ ನಮ್ಮನ್ನು ಗೆಲುವಿನ ಹಾದಿಯತ್ತ ಕೊಂಡೊಯ್ಯುತ್ತವೆ ಎಂದು ಹೇಳಿದರು.
ಕಲ್ಮಠದ ಗುರುಪಾದ ದೇವರು ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು. ಪ್ರಾಚಾರ್ಯ ಡಾ.ಎಸ್.ಎಚ್.ತೆಕ್ಕೆಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಅನಿಲ ಗಚ್ಚಿನಮನಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀಶೈಲ ಸೂಳೀಕೇರಿ, ಮಹಾದೇವ ಹಾದಿಮನಿ ಅತಿಥಿಗಳಾಗಿದ್ದರು.
ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 400 ವಿದ್ಯಾರ್ಥಿಗಳು ಭಾಗವಹಿಸಿದ್ದ ಉದ್ಯೋಗ ಮೇಳದಲ್ಲಿ 75 ಮಂದಿ ಆಯ್ಕೆಯಾಗಿದ್ದು ಒಂದು ವಾರದಲ್ಲಿ ಕೆಲಸದ ಆದೇಶಗಳನ್ನು ನೀಡಲಾಗುವುದು ಎಂದು ಕಂಪೆನಿಗಳ ಮುಖ್ಯಸ್ಥರು ತಿಳಿಸಿದ್ದಾರೆ.
ಕೀರ್ತಿ ಸೊನ್ನ ಪ್ರಾರ್ಥಿಸಿದರು. ಪ್ರೊ. ಸುನೀಲ ನಾರಾಯಣಿ ಸ್ವಾಗತಿಸಿದರು. ಡಾ.ಮಂಜುನಾಥ ಕಮ್ಮಾರ ವಂದಿಸಿದರು. ಪ್ರೊ.ಚಂದ್ರಕಾಂತ ನಾಯಕ ನಿರೂಪಿಸಿದರು.