ಸಿದ್ದಾಪುರ: ದೂರದೃಷ್ಟಿಯಿಂದ ಕೇಂದ್ರ ಸರ್ಕಾರ ಕೈಗೊಂಡ ನೋಟು ರದ್ದತಿಯು ಕ್ರಾಂತಿಕಾರಿ ಕ್ರಮವಾಗಿದೆ ಎಂದು ಸಾಗರದ ಲೆಕ್ಕ ಪರಿಶೋಧಕ ಬಿ.ವಿ ರವೀಂದ್ರನಾಥ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಅರ್ಥಶಾಸ್ತ್ರ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ‘ನೋಟು ರದ್ದತಿ-ಯ ಫಲಗಳು ಹಾಗೂ ಸವಾಲುಗಳು’ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೋಟು ರದ್ದತಿಯ ಕ್ರಮವನ್ನು ಎಷ್ಟೇ ವಿರೋಧಿಸಿದರೂ, ಅದರಿಂದಾ ಗುವ ದೂರಗಾಮಿ ಪರಿಣಾಮಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಅಶೋಕ ರೇವಣಕರ್ ಮಾತನಾಡಿ, ಬದಲಾದ ಇಂದಿನ ಪರಿಸ್ಥಿತಿಯಲ್ಲಿ ನಗದು ರಹಿತ ವ್ಯವಹಾರ ಹಾಗೂ ಡಿಜಿಟಲೈಜೇಷನ್ ತುರ್ತು ಅಗತ್ಯ ಗಳಾಗಿವೆ. ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಇದಕ್ಕೆ ಸಿದ್ಧರಾಗಿರಬೇಕು ಎಂದರು.
ವಿಚಾರ ಸಂಕಿರಣದ ಮೊದಲ ತಾಂತ್ರಿಕ ಗೋಷ್ಠಿಯಲ್ಲಿ ಮುಖ್ಯ ಬಾಷಣಕಾರರಾಗಿದ್ದ ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ.ಎಸ್.ಲಕ್ಷ್ಮೀಶ, ನೋಟು ರದ್ದತಿ ಹಾಗೂ ತೆರಿಗೆ ಪದ್ಧತಿಯ ಕುರಿತು ವಿವರಿಸಿದರು. ಸ್ಥಳೀಯ ಎಂಜಿಸಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಜೆ.ಎಸ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಎರಡನೇ ತಾಂತ್ರಿಕ ಗೋಷ್ಠಿಯಲ್ಲಿ ಮುಖ್ಯ ಬಾಷಣಕಾರರಾಗಿದ್ದ ಸೊರಬದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ಯಾಮಸುಂದರ್, ನೋಟು ರದ್ದತಿ ಹಾಗೂ ನಗದು ರಹಿತ ವ್ಯವಹಾರ ಕುರಿತು ಮಾತನಾಡಿದರು. ಲೆಕ್ಕ ಪರಿಶೋಧಕ ಬಿ.ವಿ ರವೀಂದ್ರನಾಥ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಜೆ.ಎಸ್.ಹೆಗಡೆ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀನಿವಾಸ, ಮಮತಾ, ಸುಮಾ ಮತ್ತು ಪ್ರಿಯಾ ನಿರೂಪಿಸಿದರು. 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.