ವಿಜಯಪುರ: ಬಯಲು ಸೀಮೆ ಭಾಗದಲ್ಲಿನ ರೇಷ್ಮೆ ಬೆಳೆಗಾರರಿಗೆ ನೀಡುತ್ತಿದ್ದ ಪ್ರೋತ್ಸಾಹಧನ ಶೀಘ್ರವಾಗಿ ಬಿಡುಗಡೆ ಮಾಡುವಂತೆ ರೇಷ್ಮೆ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಮಾಜಿ ಶಾಸಕ ಕೆ.ವೆಂಕಟಸ್ವಾಮಿ ಭರವಸೆ ನೀಡಿದರು.
ಪಟ್ಟಣದ ಪ್ರವಾಸಿಮಂದಿರಲ್ಲಿ ಮಾಜಿ ಶಾಸಕರನ್ನು ಭೇಟಿ ಮಾಡಿದ ರೇಷ್ಮೆ ಬೆಳೆಗಾರರು, ರೇಷ್ಮೆಗೂಡಿಗೆ ಸರ್ಕಾರದಿಂದ ಸಿ.ಬಿ.ಗೂಡಿಗೆ ₹ 30 ಮತ್ತು ಬೈವೋಲ್ಟಿನ್ ಗೂಡಿಗೆ ₹ 50 ಪ್ರೋತ್ಸಾಹಧನ ನೀಡುತ್ತಿದ್ದರು. ಇದರಿಂದ ಗೂಡಿನ ದರ ಕಡಿಮೆಯಾದಂತಹ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಆರ್ಥಿಕ ಸಂಕಷ್ಟ ಸುಧಾರಣೆಯಾಗುತ್ತಿತ್ತು.
ಪ್ರೋತ್ಸಾಹಧನ ಬಿಡುಗಡೆಯಾಗದೆ ಇರುವುದರಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದೇವೆ. 2015–16 ನೇ ಸಾಲಿನ ಆಗಸ್ಟ್ ತಿಂಗಳಿನಿಂದ ಈವರೆಗೂ ಪ್ರೋತ್ಸಾಹಧನ ಸುಮಾರು ₹ 8 ಕೋಟಿ ಯಷ್ಟು ಬಿಡುಗಡೆಯಾಗಬೇಕು. 2015 ರ ಜುಲೈ ತಿಂಗಳ ಪ್ರೋತ್ಸಾಹಧನ ಸ್ವಲ್ಪಭಾಗ ಮಾತ್ರ ಬಿಡುಗಡೆಯಾಗಿತ್ತು. ನಂತರ ಇದುವರೆಗೂ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲವೆಂದು ಅಹವಾಲು ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಬಿ.ಚೇತನ್ ಗೌಡ ಮಾತನಾಡಿ, ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹಧನದಿಂದ ಸ್ವಲ್ಪ ಮಟ್ಟಿಗೆ ರೈತರಿಗೆ ಉಪಯೋಗವಾಗುತ್ತಿದೆ. ಮಳೆಯ ಅಭಾವವಿರುವ ಈ ದಿನಗಳಲ್ಲಿ ಖುಷ್ಕಿ ಬೆಳೆಗಳು ಆಗಿಲ್ಲ ಎಂದರು.
ಭೂ ನ್ಯಾಯ ಮಂಡಳಿ ಸದಸ್ಯ ಗೊಡ್ಲುಮುದ್ದೇನಹಳ್ಳಿ ಮುನಿರಾಜು ಮಾತನಾಡಿ, ತೀವ್ರ ಮಳೆಯ ಕೊರತೆಯ ನಡುವೆ ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿ ಕೊಳವೆಬಾವಿಗಳನ್ನು ಕೊರೆಯಿಸಿದರೂ ನೀರು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ರೈತರ ಮನವಿಗೆ ಉತ್ತರಿಸಿದ ಮಾಜಿ ಶಾಸಕರು, ರೇಷ್ಮೆ ಇಲಾಖೆಯ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡು ಕ್ಷೇತ್ರದ ಶಾಸಕರೊಟ್ಟಿಗೆ ರೇಷ್ಮೆ ಇಲಾಖೆಯ ಸಚಿವರೊಂದಿಗೆ ಚರ್ಚೆ ನಡೆಸಿ ಶೀಘ್ರವಾಗಿ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಲಾಗುತ್ತದೆ ಎಂದರು.
ಮುಖಂಡರಾದ ಹುರುಳಗುರ್ಕಿ ಸಜ್ಜದ್, ವೇಣುಗೋಪಾಲ್, ಶಿವಣ್ಣ, ಲೊಕೇಶ್, ರಾಮಚಂದ್ರಪ್ಪ, ಶಿವ ಕುಮಾರ್ ಮತ್ತಿತರರಿದ್ದರು.