ಕನಕಪುರ: ‘ಈ ತಿಂಗಳ ನಂತರ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಲಿದ್ದು ಸಾರ್ವಜನಿಕರು ಕಡ್ಡಾಯವಾಗಿ ನಲ್ಲಿಗಳನ್ನು ಅಳವಡಿಸಿ ನೀರು ಉಳಿಸಬೇಕೆಂದು’ ನಗರಸಭೆ ಅಧ್ಯಕ್ಷ ಕೆ.ಎನ್.ದಿಲೀಪ್ ಮನವಿ ಮಾಡಿದರು.
ನಗರಸಭೆ ವ್ಯಾಪ್ತಿಯ ಕೆಂಕೇರಮ್ಮ ದೇವಾಲಯದ ಆವರಣದಲ್ಲಿ ನಡೆದ 24ನೇ ವಾರ್ಡ್ ಸಭೆಯಲ್ಲಿ ಸಾರ್ವಜನಿಕರಿಂದು ಸಮಸ್ಯೆ ಹಾಗೂ ಕುಂದು ಕೊರೆತೆಗಳ ಮಾಹಿತಿ ಪಡೆದು ಮಾತನಾಡಿದರು.
ಬಹುತೇಕ ಮಹಿಳೆಯರು ಕುಡಿಯುವ ನೀರಿನ ಸಮಸ್ಯೆ ಹಾಗೂ ರೇಷನ್ ವಿತರಣೆ ಸಮಸ್ಯೆ ಬಗ್ಗೆ ಸಭೆಗೆ ತಿಳಿಸಿದರು. ಮಧ್ಯರಾತ್ರಿ 2 ಗಂಟೆಯಲ್ಲಿ ನೀರು ಬಿಡುತ್ತಾರೆ. ಆ ಸಮಯದಲ್ಲಿ ನೀರನ್ನು ಹಿಡಿಯದಿದ್ದರೆ ನಮಗೆ ನೀರೇ ಸಿಗುವುದಿಲ್ಲ ಎಂದು ಅವಲತ್ತುಕೊಂಡರು.
ಸಮಸ್ಯೆ ಕುರಿತು ದಿಲೀಪ್ ಮಾತನಾಡಿ, ಮಧ್ಯರಾತ್ರಿ ನೀರು ನೀಡುವುದು ಸರಿಯಲ್ಲ, ಆ ಸಮಯವನ್ನು ಬದಲಾಯಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ವೇಳೆಯಲ್ಲಿ ನೀರು ಬಿಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.