ದೇವನಹಳ್ಳಿ: ಮಹಿಳೆಯರು ತಮ್ಮ ವಹಿವಾಟಿನಲ್ಲಿ ಅತಿ ಮುಖ್ಯವಾಗಿ ಕೌಶಲದ ಬಗ್ಗೆ ಅರಿತುಕೊಳ್ಳಬೇಕು ಎಂದು ಜಿಲ್ಲಾ ಮತ್ತು ನಗರ ಅಭಿವೃದ್ಧಿ ಕೋಶ ಸಮುದಾಯ ಅಭಿವೃದ್ಧಿ ತಜ್ಞ ಡಾ. ನರಸಿಂಹಪ್ಪ ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ದೇವನಹಳ್ಳಿ ಪುರಸಭೆ ಮತ್ತು ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿರುವ ಸ್ತ್ರೀಶಕ್ತಿ ಸಂಘ ಹಾಗೂ ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ನಡೆದ ಉಪಗ್ರಹ ಆಧಾರಿತ ತರಬೇತಿ ಶಿಬಿರ ಆರಂಭಕ್ಕೆ ಮೊದಲು ಮಾತನಾಡಿದ ಅವರು, ರಾಜ್ಯ ಸರ್ಕಾರ ಮಹಿಳೆಯರ ಸಬಲಿಕರಣಗೊಳಿಸುವ ಪ್ರಯತ್ನವಾಗಿ ಕಳೆದ ಹದಿನಾರು ವರ್ಷಗಳ ಹಿಂದೆ ಸ್ತ್ರಿಶಕ್ತಿ ಮತ್ತು ಸ್ವಸಹಾಯ ಗುಂಪುಗಳನ್ನು ಅಸ್ತಿತ್ವಕ್ಕೆ ತಂದು ವಿವಿಧ ಇಲಾಖೆಗಳ ಮೂಲಕ ಪ್ರೋತ್ಸಾಹದಾಯಕ ಅನುದಾನ ನೀಡಲಾಗಿದೆ ಎಂದರು.
ಪುರಸಭೆ ಸಮುದಾಯದ ಸಂಘಟನಾಧಿಕಾರಿ ಎಂ. ಬೈರಪ್ಪ ಮತ್ತು ಮೀನಾ ಮಾತನಾಡಿ, ಮೈಸೂರು ನಗರಾಭಿವೃದ್ಧಿ ಇಲಾಖೆ ವತಿಯಿಂದ ಡೆ. ನಲ್ಮ್ ಯೋಜನೆ ಒಕ್ಕೂಟ ವತಿಯಿಂದ ಉಪಗ್ರಹ ಆಧಾರಿತ ನಡೆಯುತ್ತಿರುವ ತರಬೇತಿ ಕಾರ್ಯಾಗಾರಕ್ಕೆ ಎರಡು ಪುರಸಭೆಯಿಂದ 50 ಸ್ತ್ರೀಶಕ್ತಿ ಮತ್ತು ಸ್ವಸಹಾಯ ಮಹಿಳೆಯರು 50 ವಿವಿಧ ಸಂಘದ ಪದಾಧಿಕಾರಿಗಳು ಹಾಜರಿದ್ದು ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.