ಚೆನ್ನೈ : ಸೂಪರ್ಸ್ಟಾರ್ ರಜನೀಕಾಂತ್ ಮುಂದಿನ ತಿಂಗಳು ಕೈಗೊಳ್ಳಲು ಉದ್ದೇಶಿಸಿರುವ ಶ್ರೀಲಂಕಾ ಭೇಟಿಗೆ ತಮಿಳು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಶ್ರೀಲಂಕಾದ ಉತ್ತರ ಜಾಫ್ನಾದಲ್ಲಿ ‘ಲೈಕಾ ಗ್ರೂಪ್ನ ಗ್ನಾನಂ ಫೌಂಡೇಶನ್’ ವತಿಯಿಂದ ನಿರಾಶ್ರಿತ ತಮಿಳರಿಗೆ 150 ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಏ. 9 ಮತ್ತು 10 ರಂದು ತೆರಳಲಿದ್ದಾರೆ.
ಜನಾಂಗೀಯ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ, ಸ್ನೇಹಿತನಾಗಿ ಮನವಿ ಮಾಡುತ್ತೇನೆ ಎಂದು ವಿದುಥಲಾಯಿ ಚಿರುಥೈಗಲ್ ಕಚ್ಚಿಯ ಸಂಸ್ಥಾಪಕ ಥೊಲ್. ಥಿರುಮವಲವನ್ ಎಚ್ಚರಿಕೆ ನೀಡಿದ್ದಾರೆ.
ರಜನೀಕಾಂತ್ ನಟನೆಯ ಬಹುನಿರೀಕ್ಷಿತ ‘2.0’ ಹಾಗೂ ಹಿಂದಿನ ‘ಎಂದಿರನ್’ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ಸಂಸ್ಥೆಯೇ ನಿರ್ಮಿಸಿತ್ತು. ಈ ಸಂಸ್ಥೆಯ ಮುಖ್ಯಸ್ಥ ಅಲ್ಲಿರಾಜ ಸುಭಾಷ್ಕರಣ್ ಅವರು ಶ್ರೀಲಂಕಾದ ಹಿಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಜತೆಗೆ ನಿಕಟ ಬಾಂಧವ್ಯ ಹೊಂದಿದ್ದಾರೆ.
ರಾಜಪಕ್ಷೆ ಆಡಳಿತದಲ್ಲೇ ತಮಿಳರ ಮೇಲೆ ದೊಡ್ಡ ಪ್ರಮಾಣದಲ್ಲಿ ದೌರ್ಜನ್ಯ ನಡೆದ ಕಾರಣಕ್ಕಾಗಿ ತಮಿಳು ಸಂಘಟನೆಗಳು ರಜನೀಕಾಂತ್ ಭೇಟಿಗೆ ಆಕ್ರೋಶ ವ್ಯಕ್ತಪಡಿಸಿವೆ.