ಮತ್ತೆ 6 ಕೋಟಿ ರೂ. ಸಾಲ ಎತ್ತಲು ಸರ್ಕಾರದ ನಿರ್ಧಾರ
ಬೆಂಗಳೂರು, ಮಾ. 24– ರಾಜ್ಯ ಸರ್ಕಾರ ಮತ್ತೆ ಆರೂವರೆ ಕೋಟಿ ರೂಪಾಯಿ ಸಾಲವನ್ನು ಎತ್ತಲು ಉದ್ದೇಶಿಸಿರುವುದಾಗಿ ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗ್ಗಡೆಯವರು ಇಂದು ವಿಧಾನ ಸಭೆಯಲ್ಲಿ ಬಜೆಟ್ ಮಂಡಿಸುತ್ತಾ ತಿಳಿಸಿದರು.
ಸರ್ಕಾರಿ ನೌಕರರಿಗೆ 30 ಕೋಟಿ ರೂ.
ಬೆಂಗಳೂರು, ಮಾ. 24– ಮೂರನೆ ಯೋಜನೆಯ ಅವಧಿಯಲ್ಲಿ ಸರ್ಕಾರಿ ನೌಕರರ ವೇತನವನ್ನು ಹೆಚ್ಚಿಸುವುದಕ್ಕಾಗಿ ರಾಜ್ಯ ಸರ್ಕಾರ 30 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿರುವುದಾಗಿ ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗ್ಗಡೆಯವರು ಇಂದು ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತ ತಿಳಿಸಿದರು.
ಆರ್ಥಿಕ ಶಿಸ್ತು ಪಾಲನೆ ಬಗ್ಗೆ ಕೇಂದ್ರಕ್ಕೆ ಭರವಸೆ
ಬೆಂಗಳೂರು, ಮಾ. 24– ಕೇಂದ್ರ ಮತ್ತು ರಾಜ್ಯಗಳೆರಡೂ ರಾಷ್ಟ್ರೀಯ ಯೋಜನೆಯನ್ನು ಅಳವಡಿಸಿಕೊಳ್ಳಬೇಕಾಗಿರುವುದರಿಂದ ಮತ್ತು ಶಾಂತಿಪಾಲನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಾಜ್ಯಗಳು ತಮ್ಮ ಮಿತ ಸಂಪನ್ಮೂಲಗಳಿಂದಲೇ ಕಾರ್ಯಗತ ಮಾಡಬೇಕಾಗಿರುವುದರಿಂದ ಫೆಡರಲ್ ಪದ್ಧತಿಯಲ್ಲಿ ರಾಜ್ಯಗಳು ಕೇಂದ್ರವನ್ನು ಅವಲಂಬಿಸಬೇಕಾದುದು ಅನಿವಾರ್ಯ ಎಂದು ಅರ್ಥಸಚಿವ ರಾಮಕೃಷ್ಣ ಹೆಗ್ಗಡೆಯವರು ಇಂದು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
ರಾಜ್ಯದ ವ್ಯಾಪ್ತಿಗೆ ಒಳಪಟ್ಟ ವಿಷಯಗಳಲ್ಲಿ ಸಾಕಷ್ಟು ಸ್ವಾತಂತ್ರ್ಯವನ್ನು ನೀಡುವುದು ಅಗತ್ಯವಲ್ಲದೆ, ಕೇಂದ್ರವು ನೀಡುತ್ತಿರುವ ನೆರವಿನ ಮೇಲೆ ತುಂಬಾ ನಿರ್ಬಂಧಗಳನ್ನು ಹಾಕಬಾರದೆಂದು ತಿಳಿಸಿದರು.
ಕಂದಾಯ ರದ್ದು; ಪಾನನಿರೋಧ ಸಡಿಲಿಸಿ 4 ಕೋಟಿ ಗಳಿಕೆ
ಬೆಂಗಳೂರು, ಮಾ. 24– ಸದ್ಯದ ಸ್ವರೂಪದಲ್ಲಿ ಭೂ ಕಂದಾಯದ ರದ್ದು– 4 ಕೋಟಿ ರೂಪಾಯಿ ಹೆಚ್ಚು ಆದಾಯ ತರುವಂತೆ ಪಾನನಿರೋಧದ ಸಡಿಲಿಕೆ– ಹೊಸ ತೆರಿಗೆಯಿಲ್ಲ ಹಾಗೂ ಸಾಮಾನ್ಯ ಆದಾಯ ವ್ಯಯದಲ್ಲಿ 8.59 ಕೋಟಿ ರೂ. ಉಳಿತಾಯವಿರುವ 1967–68ನೇ ಸಾಲಿನ ಬಜೆಟ್ಟನ್ನು ಅರ್ಥಸಚಿವ ರಾಮಕೃಷ್ಣ ಹೆಗ್ಗಡೆ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದರು.
ಮುಂದಿನ ವರ್ಷ ಯೋಜನೆಗಳಿಗಾಗಿ 62.50 ಕೋಟಿ ರೂಪಾಯಿ ಖರ್ಚು ಮಾಡಲಿರುವ ರಾಜ್ಯದಲ್ಲಿ ವರ್ಷಾಂತ್ಯದಲ್ಲಿ ಒಟ್ಟಾರೆ 3.50 ಕೋಟಿ ರೂಪಾಯಿ ಖೋತಾ ಬೀಳುತ್ತದೆ. ಪಾನ ನಿರೋಧದ ಮತ್ತಷ್ಟು ಸಡಿಲಿಕೆಯಿಂದ 4 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿರುವುದರಿಂದ 50 ಲಕ್ಷ ರೂ. ಉಳಿತಾಯ
ವಾಗುತ್ತದೆ ಎಂದು ಅರ್ಥಸಚಿವರು ವಿವರಿಸಿದರು. ಅರ್ಥಸಚಿವರು ಮೊದಲು ಪ್ರಸ್ತುತ ವರ್ಷ ಎಂದರೆ 1966–67 ರಲ್ಲಿ ಅಂದಾಜು ಮಾಡಿದುದಕ್ಕಿಂತ ಹೇಗೆ ಆದಾಯ ಹಾಗೂ ಖರ್ಚುಗಳೆರಡೂ ಹೆಚ್ಚಿ 5.26 ಕೋಟಿ ರೂಪಾಯಿ ಉಳಿತಾಯ
ವಾಗುವುದನ್ನು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.