ಬೆಂಗಳೂರು: ‘ವಿದ್ಯುತ್ ಖರೀದಿ ಹಗರಣದ ಸದನ ಸಮಿತಿ ವರದಿಯನ್ನು 15 ದಿನಗಳ ಒಳಗೆ ಸಲ್ಲಿಸಲಾಗುವುದು’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿಧಾನ ಸಭೆಯಲ್ಲಿ ಶುಕ್ರವಾರ ತಿಳಿಸಿದರು.
ವರದಿ ಸಲ್ಲಿಸುವಂತೆ ಆಗ್ರಹಿಸಿ ಎಚ್.ಡಿ. ರೇವಣ್ಣ, ಎನ್.ಎಚ್. ಕೋನರಡ್ಡಿ ಸೇರಿದಂತೆ ಜೆಡಿಎಸ್ ಎಲ್ಲ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಲು ಮುಂದಾದರು.
‘ವಿದ್ಯುತ್ ಖರೀದಿಗೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ಸದಸ್ಯರು ಮಾಡಿದ ಆರೋಪಗಳಿಗೆ ಪೂರಕವಾಗಿ ಮಾಹಿತಿಗಳನ್ನು ನೀಡಿಲ್ಲ. ನಾನೊಬ್ಬನೇ ಅಭಿಪ್ರಾಯ ನೀಡುವುದಾದರೇ ಈಗಾಗಲೇ ವರದಿ ಸಲ್ಲಿಸುತ್ತಿದ್ದೆ’ ಎಂದು ಶಿವಕುಮಾರ್ ಹೇಳಿದರು.
‘ಇಂಧನ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರನ್ನು ರಕ್ಷಿಸುವ ಉದ್ದೇಶದಿಂದ ವರದಿ ಸಲ್ಲಿಸಲು ವಿಳಂಬ ಮಾಡಲಾಗುತ್ತಿದೆ ಎನ್ನುವ ಆರೋಪ ಸರಿಯಲ್ಲ’ ಎಂದೂ ಅವರು ಹೇಳಿದರು.