ಬೆಂಗಳೂರು: ರಾಜ್ಯ ಸರ್ಕಾರ 2015–16ರಲ್ಲಿ ಬಿಡುಗಡೆ ಮಾಡಿದ ಅನುದಾನದಲ್ಲಿ 16 ಪ್ರಕರಣಗಳಲ್ಲಿ ತಲಾ ₹100 ಕೋಟಿಗೂ ಹೆಚ್ಚು ಹಣ ಬಳಕೆಯಾಗದೆ ಉಳಿದಿದೆ ಎಂದು ಹಣಕಾಸಿನ ವ್ಯವಹಾರಗಳ ಮೇಲಿನ ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಳಕೆಯಾಗದೆ ಉಳಿದ ಅನುದಾನದ ಒಟ್ಟು ಮೊತ್ತ ₹16,259.17 ಕೋಟಿ. ಅತಿ ಹೆಚ್ಚಿನ ಪ್ರಮಾಣದ ಹಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಹಣಕಾಸು, ಜಲ ಸಂಪನ್ಮೂಲ, ಋಣ (ಸಾಲ, ಬಡ್ಡಿ ಇತರೆ) ಸೇವೆಗಳು, ಶಿಕ್ಷಣ, ಕೃಷಿ ಮತ್ತು ತೋಟಗಾರಿಕೆ ಹಾಗೂ ಆರೋಗ್ಯ ಇಲಾಖೆಯಲ್ಲಿ ಕಂಡುಬಂದಿದೆ.
ಆರೋಗ್ಯ ಇಲಾಖೆಯಲ್ಲಿ ₹471.15 ಕೋಟಿ ಉಳಿಕೆಯಾಗಿದೆ. ಹಣ ಬಿಡುಗಡೆ ಮಾಡಿದ ಸರ್ಕಾರದ ಆದೇಶ ಬಾರದಿರುವುದು ಮತ್ತು ಆರ್ಥಿಕ ವರ್ಷದ ಕೊನೆಯಲ್ಲಿ ಸಲ್ಲಿಸಿದ ಬಿಲ್ಗಳು ಖಜಾನೆಯಲ್ಲಿ ಒಪ್ಪದೇ ಇದ್ದುದರಿಂದ ಪರಿಶಿಷ್ಟ ಜಾತಿ ಉಪ ಯೋಜನೆಯ ₹ 107.87 ಕೋಟಿ ಮತ್ತು ಗಿರಿಜನ ಯೋಜನೆಯ ₹42.28 ಕೋಟಿ ಬಳಕೆ ಆಗಿಲ್ಲ.
100 ಹೊಸ ಐಟಿಐಗಳಿಗೆ ಯಂತ್ರೋಪಕರಣ ಖರೀದಿಗೆ ಟೆಂಡರ್ ಕರೆಯಲು ಸಮಯದ ಅಭಾವದಿಂದ ₹23.10 ಕೋಟಿ ಉಳಿಕೆಯಾಗಿದೆ ಎಂದೂ ವರದಿ ತಿಳಿಸಿದೆ.