ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಗತಜ್ಞನ ಬದುಕಿನ ರೋಚಕ ಪುಟಗಳು

Last Updated 25 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ವಿಷಯಾಂತರ (ನರಜೀವಿ ಉರಗಜೀವಿಗಳ ಒಡನಾಟದ ಜೀವನಗಾಥೆ)

ಲೇ: ಗುರುರಾಜ್ ಸನಿಲ್

ಪ್ರಕಾಶನ: ಗೀತಾ ಪ್ರಕಾಶನ, ಉಡುಪಿ

*

ಉಡುಪಿಯ ಗುರುರಾಜ್ ಸನಿಲ್ ಖ್ಯಾತ ಉರಗತಜ್ಞ ಮತ್ತು ಪರಿಸರಪ್ರೇಮಿ. ಸಾಮಾನ್ಯ ಜನರಿಗೆ ಅವರ ಮನೆ–ಮಠಗಳಿಗೆ ಬಂದು ಭಯಪಡಿಸುವ ವಿಷದ ಹಾವುಗಳನ್ನು ಲೀಲಾಜಾಲವಾಗಿ ಹಿಡಿದು ದೂರದ ಅರಣ್ಯಗಳಿಗೆ ಬಿಡುವ ಆಪದ್ಬಾಂಧವ. ಗುರುರಾಜ್ ಅವರು ಒಬ್ಬ ಉತ್ತಮ ಬರಹಗಾರರೂ ಹೌದು. ಬದುಕಿನ ಕಡುಕಷ್ಟಗಳನ್ನು ಹಾದುಬಂದು ಅದನ್ನು ರಸವತ್ತಾಗಿ ವರ್ಣಿಸಬಲ್ಲ ‘ವಿಷಯಾಂತರ’ ಎಂಬ ಈ ಕೃತಿಯಲ್ಲಿ ಸನಿಲ್ ತಮ್ಮ ಅನುಭವಗಳನ್ನು, ಉರಗಸಾಹಚರ್ಯದ ಬದುಕಿನ ಅನುಭವಗಳ ಜೊತೆಗೆ ಹಾಸುಹೊಕ್ಕಾಗಿಸಿ ವಿಷಯಾಂತರ ಮಾಡಿದರೂ ಒಂದರೊಳಗೆ ಇನ್ನೊಂದನ್ನು ಕರಗಿಸಿ ರಸಪಾಕ ಮಾಡಿ ಕನ್ನಡಕ್ಕೆ ಒಂದು ವಿಶಿಷ್ಟ ಕೃತಿಯನ್ನು ನೀಡಿದ್ದಾರೆ.

ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ನಾಗೇಶ ಹೆಗಡೆ ಲೇಖಕರ ವ್ಯಕ್ತಿತ್ವದ ಎರಡು ಮುಖಗಳನ್ನು ಅರ್ಥೈಸಿರುವುದು ಹೀಗೆ: ‘ಹಾವನ್ನು ಪಳಗಿಸಬಲ್ಲವರಿಗೆ ಗರುಡಮಚ್ಚೆ ಇರುತ್ತದೆ ಎಂಬ ಪ್ರತೀತಿ ಇದೆ. ಗುರುರಾಜ ಸನಿಲರಿಗೆ ಗರುಡ ಅಲ್ಲ, ಕನ್ನಡನಾಡಿನ ಲಾಂಛನವಾದ ಗಂಡಭೇರುಂಡ ಮಚ್ಚೆಯೇ ಇದ್ದೀತು. ಆ ಕಾಲ್ಪನಿಕ ಪಕ್ಷಿಗೆ ಎರಡು ತಲೆ ಇರುತ್ತದಂತೆ. ಇವರ ಒಂದು ತಲೆಯಲ್ಲಿ ಅಪಾರ ಸರ್ಪಜ್ಞಾನ ಹಾಗೂ ಇನ್ನೊಂದು ತಲೆಯಲ್ಲಿ ಅಪೂರ್ವ ಕನ್ನಡ ಜ್ಞಾನ ಇದೆ, ಅವೆರಡರ ಸಮ್ಮಿಳನ ಇಲ್ಲಿದೆ. ಇದು ಗುರುರಾಜ ಸನಿಲ್ ಅಲ್ಲ, ಕನ್ನಡದ ಸಲಿಲ’.

ಗುರುರಾಜ್‌ರ ಈ ಅನುಭವ ಕಥನ ಕನ್ನಡಕ್ಕೆ ಯಾಕೆ ವಿಶಿಷ್ಟ ಅಂದರೆ ಈ ಕ್ಷೇತ್ರದಲ್ಲಿ (ವಿಷಸರ್ಪಗಳನ್ನು ಹಿಡಿಯುವುದು, ಅವುಗಳ ಶುಶ್ರೂಷೆ, ಸಂರಕ್ಷಣೆ, ಮಾಹಿತಿ ಕಾರ್ಯಾಗಾರಗಳನ್ನು ನಡೆಸಿಕೊಡುವುದು) ಪ್ರಾರಂಭದಲ್ಲಿ ಅನುಭವದಿಂದ, ನಂತರ ಗ್ರಂಥಗಳ ಅಧ್ಯಯನದ ಮೂಲಕ ತಜ್ಞರಾದ ವ್ಯಕ್ತಿಯೊಬ್ಬರು ತಮ್ಮ ಅನುಭವಗಳನ್ನು ಸರಸ ಕನ್ನಡದಲ್ಲಿ ದಾಖಲಿಸಿರುವ ಕಾರಣಕ್ಕೆ, ಮತ್ತು ಆನುಷಂಗಿಕವಾಗಿ ಈ ಸಂಗತಿಗಳ ಬಗ್ಗೆ ಓದುಗರಿಗೆ ತಿಳಿವಳಿಕೆ ನೀಡಿರುವ ಕಾರಣಕ್ಕೆ. ಬೇಟೆಯ ಬಗ್ಗೆ ಕನ್ನಡದಲ್ಲಿ ಒಳ್ಳೆಯ ಮೃಗಯಾ ಸಾಹಿತ್ಯ ಬಂದಿದೆ. ಆದರೆ ಈ ಕ್ಷೇತ್ರ ಕನ್ನಡದ ಓದುಗರಿಗೆ ಹೊಸತು. ಮತ್ತು ಈಗಿನ ಅಗತ್ಯವೂ ಹೌದು. ಪ್ರಾಕೃತಿಕ ಪರಿಸರಗಳ ನಾಶದಿಂದ ಉರಗಜೀವಿಗಳು ಹೆಚ್ಚುಹೆಚ್ಚಾಗಿ ಮನುಷ್ಯ ಜೀವಿಗಳ ಸಂಪರ್ಕಕ್ಕೆ ಬರುತ್ತಿವೆ. ಅವುಗಳ ಬಗ್ಗೆ ಅರಿವು ಮೂಡಿಸಿಕೊಂಡು, ಕೊಲ್ಲದೆ ಪರಿಸರಕ್ಕೆ ಹಿಂದಿರುಗಿಸುವ ಜವಾಬ್ದಾರಿ ಮನುಷ್ಯರಿಗಿದೆ ಎನ್ನುವುದನ್ನು ಗುರುರಾಜ್ ತಮ್ಮ ಬರವಣಿಗೆ ಮತ್ತು ಉಪನ್ಯಾಸಗಳಲ್ಲಿ ಒತ್ತಿಹೇಳುತ್ತಾರೆ.  

ಗುರುರಾಜ್ ಅವರ ಬಾಲ್ಯ ಹೆತ್ತವರಿದ್ದರೂ ಅವರ ಪ್ರೀತಿ, ಕಾಳಜಿ, ರಕ್ಷಣೆಗಳಿಲ್ಲದೆ ಹೆಚ್ಚುಕಡಿಮೆ ಅನಾಥ ಬಾಲಕನಂತಿತ್ತು. ಆಗಿನ ಬಡತನವನ್ನು, ಹಸಿವನ್ನು, ತುಂಟಾಟಗಳನ್ನು ಅವರು ಬಹಳ ಭಾವದೂರದಿಂದ ಹಾಸ್ಯಧಾಟಿಯಲ್ಲಿ ನಿರೂಪಿಸುತ್ತಾರೆ.

ಲೇಖಕರಿಗೆ ಬಾಲ್ಯದಲ್ಲಿ ಪ್ರೀತಿ ಅನ್ನುವುದೇನಾದರೂ ಸಿಕ್ಕಿದ್ದರೆ ಅದು ಅವರ ಅಜ್ಜಿಯಿಂದ. ಶಾಲೆಯಲ್ಲಿ ತನ್ನನ್ನು ರೇಗಿಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಹೊಡೆದಾಟ ಮಾಡಿ ಶಿಕ್ಷಕರಿಂದ ಬೆತ್ತದೇಟು ತಿನ್ನುವಾಗಲೂ ಅವಡುಗಚ್ಚಿ ನಿಂತಿರುತ್ತಿದ್ದ ಹಟಮಾರಿ ಹುಡುಗ ಒಮ್ಮೆ ಹೆಡ್‌ಮಾಸ್ತರರ ಪ್ರೀತಿಯ ಮಾತಿಗೆ ಕರಗಿ ಬಿಕ್ಕಿಬಿಕ್ಕಿ ಅಳುವ ಸನ್ನಿವೇಶ, ತಮ್ಮ ತೋಟದಲ್ಲಿ ಕದ್ದು ಹಣ್ಣುಕೀಳುತ್ತಿದ್ದ ತುಂಟಬಾಲಕ ಸನಿಲ್‌ರನ್ನು ತೋಟದ ಒಡತಿ ಮತ್ತು ಆಕೆಯ ಮಗ ಸೊಂಟಕ್ಕೆ ಹಗ್ಗ ಕಟ್ಟಿ ಆಳವಾದ ಬಾವಿಗೆ ಇಳಿಸಿ ಪದೇ ಪದೇ ನೀರಿನಾಳಕ್ಕೆ ಎತ್ತಿಎತ್ತಿ ಹಾಕಿದ ಶಿಕ್ಷೆ – ಇಂತಹ ಅನುಭವಗಳು ಅನನ್ಯವಾಗಿವೆ.

‘ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವ ವಿವರಣೆಗಳು ಈ ಕೃತಿಯಲ್ಲಿ ಹಲವು ಬರುತ್ತವೆ’ ಎಂದು ನಾಗೇಶ್ ಹೆಗಡೆ ಗುರುತಿಸಿದ್ದಲ್ಲದೆ, ‘ಗದ್ಯರೂಪದ ಕಾವ್ಯ ಎಂದರೆ ಇದು. ಕನ್ನಡದ ಭಾಗ್ಯ ಇದು’ ಎಂದು ಶ್ಲಾಘಿಸಿದ್ದಾರೆ. ಲೇಖಕರ ಪ್ರೀತಿಪಾತ್ರಳಾದ ಅಜ್ಜಿಯನ್ನು ನಾಗರಹಾವೊಂದು ಕಚ್ಚಿ ಆಕೆಯ ಸಾವಿಗೆ ಕಾರಣವಾದ ಮೇಲೆ ಲೇಖಕರಿಗೆ ಹಾವುಗಳನ್ನೆಲ್ಲ ಕೊಲ್ಲಬೇಕೆಂಬ ರೋಷ ಉಕ್ಕಿ ಒಂದು ಹಾವನ್ನು ಕೊಲ್ಲುತ್ತಾರೆ. ಇನ್ನೊಂದನ್ನು ಕೊಲ್ಲಬೇಕೆಂದು ಕೊಡಪಾನವೊಂದರಲ್ಲಿ ಅದನ್ನು ಹಾಕಿಕೊಂಡು ಕಾಡಿಗೆ ಹೋಗಿ ಅದರೆದುರು ನಿಂತಾಗ, ಹಾವಿನ ಸೌಂದರ್ಯಕ್ಕೆ ತನ್ಮಯರಾಗಿ ರೋಷವನ್ನೆಲ್ಲ ಕಳೆದುಕೊಂಡು ಬದಲಾದ ವ್ಯಕ್ತಿಯಾದ ಸನ್ನಿವೇಶವೂ ಹೃದಯಸ್ಪರ್ಶಿಯಾಗಿದೆ.

ನಾಗರ ಹಾವು, ಕಾಳಿಂಗ ಇತ್ಯಾದಿ ವಿಷಸರ್ಪಗಳನ್ನು ಹಿಡಿಯುವಾಗ ಇತರರ ಅಚಾತುರ್ಯದಿಂದ, ತನ್ನದೇ ಏಕಾಗ್ರತೆ ತಪ್ಪಿದ ಕಾರಣ ಗುರುರಾಜ್ ಸನಿಲ್ ಹಲವಾರು ಬಾರಿ ಹಾವಿನ ಕಡಿತಕ್ಕೆ ಒಳಗಾಗಿ ಸಾವಿನದವಡೆಯೊಳಗೆ ಹೋಗಿಬಂದಿದ್ದಾರೆ. ‘ಹದಿಮೂರನೆಯ ನಾಗರ ಕಡಿತ’, ‘ಸಾವು ಆವರಿಸಿಕೊಂಡ ಕ್ಷಣಗಳು’, ‘ಕಾಳಿಂಗನ ಕೋಪಕ್ಕೆ ತುತ್ತಾದಾಗ’, ‘ಬದುಕಿನಲ್ಲಿ ಅರಿವುಮೂಡಿಸಿದ ನಾಗರ ಕಡಿತ’ – ಇಂತಹ ಅಧ್ಯಾಯ ಶೀರ್ಷಿಕೆಗಳನ್ನು ನೋಡಿದಾಗ ಈ ಕಥಾನಕ ಎಷ್ಟು ಗಹನವಾದ ಅನುಭವಗಳನ್ನು ಓದುಗನಿಗೆ ಕೊಡುತ್ತದೆ ಎನ್ನುವುದು ತಿಳಿಯುತ್ತದೆ. ‘ಹಾವಿನ ಕಡಿತಕ್ಕೆ ಪ್ರಥಮ ಚಿಕಿತ್ಸೆ ಮತ್ತು ಅನುಸರಿಸಬೇಕಾದ ಕ್ರಮ’ ಎನ್ನುವ ಕೊನೆಯ ಅಧ್ಯಾಯವು ಜನೋಪಯೋಗಿಯಾಗಿದೆ.

ವಿಶಿಷ್ಟ ಕ್ಷೇತ್ರದ ಸಾಧಕನೊಬ್ಬನ ಈ ಜೀವನಗಾಥೆ, ಕಥನ ಕೌಶಲದ ಕಾರಣ ಸೃಜನಶೀಲ ಕೃತಿಯಂತೆ ಓದಿಸಿಕೊಳ್ಳುವುದು ಇದರ ಹೆಚ್ಚುಗಾರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT