ಬೆಂಗಳೂರು: ವಿಧಾನಸಭೆಯಲ್ಲಿ ಮಾತಿನ ಮೂಲಕ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಕಾಲೆಳೆಯಲು ಬಿಜೆಪಿಯ ಸಿ.ಟಿ.ರವಿ ಸಜ್ಜಾಗಿರುತ್ತಾರೆ.
ಮುಖ್ಯಮಂತ್ರಿ ವಿರುದ್ಧ ಜಗದೀಶ ಶೆಟ್ಟರ್ ಇತ್ತೀಚೆಗೆ ಹಕ್ಕುಚ್ಯುತಿ ಮಂಡಿಸಿದಾಗ, ಉತ್ತಮ ಸಂಸದೀಯ ನಡವಳಿಕೆ ಹೇಗಿರಬೇಕು ಎಂದು ರಮೇಶ್ ಕುಮಾರ್ ವಿಶ್ಲೇಷಿಸುತ್ತಿದ್ದರು. ಆಗ ರವಿ, ‘ರಮೇಶ್ ಕುಮಾರ್ ಅವರನ್ನು ಮೊದಲೇ ಸಚಿವರನ್ನಾಗಿ ಮಾಡಿದ್ದರೆ ಚೆನ್ನಾಗಿ ಇರುತ್ತಿತ್ತು’ ಎಂದು ಕುಟುಕಿದರು.
ಅದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ‘ಏಯ್ ರವಿ, ನಿನ್ನನ್ನು ಹಿಂದಿನ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವನಾಗಿ ಮಾಡಿಸಿದ್ದೇ ತಪ್ಪಾಯಿತು. ನೀನಿನ್ನೂ ಬೆಳೆದಿಲ್ಲಪ್ಪ. ಆಗ ನಿನ್ನನ್ನ ಪ್ರಾಥಮಿಕ ಶಿಕ್ಷಣ ಸಚಿವನನ್ನಾಗಿ ಮಾಡಬೇಕಿತ್ತು. ಅಲ್ಲಿಂದಲೇ ನೀನು ಕಲಿಯಬೇಕಿತ್ತಪ್ಪಾ’ ಎಂದರು.
‘ನೀವೇ ತಾನೆ ನನ್ನನ್ನು ಮಿನಿಸ್ಟ್ರು ಮಾಡಿದ್ದು’ ಎಂದು ರವಿ ಹೇಳಿದರು.
‘ಹೌದಪ್ಪ, ಯಾವುದೇ ಸರ್ಕಾರ ಬಂದ್ರೂ, ಯಾರನ್ನ ಮಿನಿಸ್ಟ್ರು ಮಾಡ್ಬೇಕು ಅಂತ ಮುಖ್ಯಮಂತ್ರಿಯಾದವರು ನನ್ನ ಸಲಹೆ ಕೇಳ್ತಾರೆ. ಆದ್ರೆ ನಾನು ಮಿನಿಸ್ಟ್ರು ಆಗಬೇಕಾದರೆ 40 ವರ್ಷ ಕಾಯಬೇಕಾಯ್ತು ನೋಡಪ್ಪ’ ಎಂದು ರಮೇಶ್ ಕುಮಾರ್ ಹೇಳಿದರು. ಆಗ ಸದನದಲ್ಲಿ ವಿಷಾದ ಮತ್ತು ನಗೆ ಎರಡೂ ವ್ಯಕ್ತವಾಯಿತು.