ವಿಜಯಪುರ: ‘ಅಧಿಕಾರಿಗಳು ತಮ್ಮ ಅನುಕೂಲಕ್ಕಾಗಿ ಬಜೆಟ್ ರೂಪಿಸಿರುವಂತಿದೆ. ಸದಸ್ಯರಿಗೂ ಕೊಂಚ ‘ಭಾಗ್ಯ’ ಕಲ್ಪಿಸಿ. ಅಧ್ಯಯನ ಪ್ರವಾಸದ ಹೆಸರಿನಡಿ ನಮಗೂ ತುಸು ರೊಕ್ಕ ಎತ್ತಿಡಿ...’- ಇಲ್ಲಿನ ಮಹಾನಗರ ಪಾಲಿಕೆಯ ಕೆಲ ಸದಸ್ಯರ ಆಗ್ರಹವಿದು.
ನಗರದ ಹೊರವಲಯದ ಭೂತನಾಳ ಕೆರೆ ಬಳಿ ಈಚೆಗೆ ನಡೆದ ಮಹಾನಗರಪಾಲಿಕೆಯ ಬಜೆಟ್ ಸಭೆಯಲ್ಲಿ ಈ ಪ್ರಸ್ತಾಪವನ್ನು ಪ್ರಬಲವಾಗಿ ಮಂಡಿಸಲಾಯಿತು.
ಪಾಲಿಕೆಯ ಲೆಕ್ಕಪತ್ರ ವಿಭಾಗದ ಅಧಿಕಾರಿ ಬಜೆಟ್ನ ಭಾಷಣದ ಪ್ರತಿ ಓದುವಾಗ, ಬಹುತೇಕ ನೌಕರ ಸಂಬಂಧಿತ ವೆಚ್ಚವನ್ನೇ ಪ್ರಸ್ತಾಪಿಸಿದರು. ಇದಕ್ಕೆ ಸದಸ್ಯರು ಅನುಮತಿ ನೀಡುವ ಜತೆಗೆ ಆಯುಕ್ತರ ಬಳಿ ಬೇಡಿಕೆಯೊಂದನ್ನು ಮಂಡಿಸಿದರು. ತಕ್ಷಣವೇ ಆಯುಕ್ತರು ಸಮ್ಮತಿಯ ಮುಗುಳ್ನಗೆ ಬೀರಿದರು.
‘ಸೂರತ್, ಅಹಮದಾಬಾದ್, ಪೂನಾ ಮಹಾನಗರ ಪಾಲಿಕೆಗೆ ಅಧ್ಯಯನ ಪ್ರವಾಸ ರೂಪಿಸಿ ಎಂದು ಬಿಜೆಪಿ ಸದಸ್ಯ ರಾಜಶೇಖರ ಮಗಿಮಠ ಅವರು ಹೇಳುತ್ತಿದ್ದಂತೆಯೇ, ಮತ್ತೊಬ್ಬ ಸದಸ್ಯ ರಾಹುಲ ಜಾಧವ, ‘ವಿದೇಶದ ಅಭಿವೃದ್ಧಿ ಅಧ್ಯಯನ ಮಾಡೋಣ. ನನ್ನ ಬಳಿ ಪಾಸ್ಪೋರ್ಟ್ ಇದೆ. ಇಲ್ಲದವರು ಮಾಡಿಸಿಕೊಳ್ಳಿ. ಸಿಂಗಪುರ ಅಧ್ಯಯನಕ್ಕೆ ತೆರಳೋಣ’ ಎಂದರು.
ಈ ನಡುವೆ ಕಾಂಗ್ರೆಸ್ ಸದಸ್ಯ ಮೈನುದ್ದೀನ್ ಬೀಳಗಿ, ‘ನಾವು 40 ಸದಸ್ಯರಿದ್ದು, ಒಬ್ಬೊಬ್ಬರಿಗೆ ತಲಾ ಒಂದೊಂದು ಲಕ್ಷ ರೂಪಾಯಿ ಎತ್ತಿಡಿ. ಆಮೇಲೆ ಎಲ್ಲಿಗೆ ಹೋಗೋದು ಎಂಬೋದನ್ನ ತೀರ್ಮಾನಿಸೋಣ’ ಎನ್ನುತ್ತಿದ್ದಂತೆ ಆಯುಕ್ತರು ಬಜೆಟ್ ಕೊರತೆಯ ಕಾರಣದಿಂದ ಪೆಚ್ಚು ಮೋರೆ ಹಾಕಿದರೆ, ಕೆಲ ಸದಸ್ಯರು ಕುಳಿತಲ್ಲೇ ‘ಮೋಜಿನ ಪ್ರವಾಸದ’ ಕಲ್ಪನಾ ಲೋಕದಲ್ಲಿ ವಿಹರಿಸಿದರು.