ಶಿರಸಿ: ಹೇಮಲಂಬಿ ಸಂವತ್ಸರಕ್ಕೆ ಸ್ವಾಗತ ಕೋರುವ ಮೂಲಕ ಯುಗಾದಿ ಆಚರಿಸುವ ಹಿಂದೂಗಳು ಇದೇ 28ರ ಸಂಜೆ 6.30 ಗಂಟೆಗೆ ವಿಕಾಸಾಶ್ರಮ ಮೈದಾನದಿಂದ ಆರಂಭವಾಗುವ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲ ದೇವಾಡಿಗ ವಿನಂತಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುಗಾದಿ ಹಬ್ಬವನ್ನು ಸಾರ್ವತ್ರಿಕವಾಗಿ ಮೊದಲ ಬಾರಿಗೆ 19 ವರ್ಷಗಳಿಂದ ಶಿರಸಿಯಲ್ಲಿ ಆಚರಿಸಲಾಗುತ್ತಿದೆ ಎಂದರು.
‘ಈ ಬಾರಿ 20ನೇ ವರ್ಷವನ್ನು ಅದ್ದೂರಿಯಾಗಿ ಆಚರಿಸಲು ಕಳೆದ 10 ದಿನಗಳಿಂದ ನಗರದ ಯುವಕ ಸಂಘಗಳು, ಗೆಳೆಯರ ಬಳಗ, ಉತ್ಸವ ಸಮಿತಿ ಸದಸ್ಯರು, ಮಹಿಳಾ ಸಂಘದ ಸದಸ್ಯರು ಮನೆ ಮನೆ ಸಂಪರ್ಕ ಮಾಡುತ್ತಿದ್ದಾರೆ.
ಧಾರ್ಮಿಕ ಮಹಾಮಂಡಲದ ವತಿಯಿಂದ ಶಿರಸಿಯ ಎಲ್ಲ ಪ್ರಮುಖ ದೇವಸ್ಥಾನಗಳಲ್ಲಿ ಸಾಮೂಹಿಕ ಯುಗಾದಿ ಉತ್ಸವ ಆಚರಿಸಲು ತಿಳಿಸಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಯುಗಾದಿ ಆಚರಣೆ ಮಹತ್ವ ತಿಳಿಸುವ ಕಾರ್ಯವಾಗುತ್ತಿದೆ ಎಂದರು.
ಸಾರ್ವಜನಿಕರು ಯುಗಾದಿ ದಿನ ಮನೆಯನ್ನು ಅಲಂಕರಿಸಿ, ಭಗವಾಧ್ವಜ ಕಟ್ಟಿ ಹೊಸ ವರ್ಷ ಆಚರಿಸಬೇಕು. ಕಲಾತಂಡಗಳು, ಸುಮಾರು 30ಕ್ಕೂ ಹೆಚ್ಚು ಪೌರಾಣಿಕ ಬಂಡಿಚತ್ರಗಳು, ಕೋಲಾಟ, ಜಾಂಜ್, ಡೊಳ್ಳು ಕುಣಿತ ತಂಡ, ಬೇವು-ಬೆಲ್ಲ ವಿತರಣೆ, ಧಾರ್ಮಿಕ ನೃತ್ಯ ರೂಪಕ ತಂಡಗಳು ಶೋಭಾಯಾತ್ರೆಗೆ ಮೆರುಗು ನೀಡಲಿವೆ.
ಶಕ್ತಿದೇವತೆ ಮಾರಿಕಾಂಬೆ ದೇವಿಯ ಕಾಷ್ಠಚಿತ್ರ ಅನಾವರಣಗೊಳ್ಳಲಿದೆ ಎಂದು ಅವರು ಹೇಳಿದರು. ಯುಗಾದಿ ಆಚರಣೆಗೆ ಅಣಿಯಾಗುವಂತೆ ಈಗಾಗಲೇ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.
ಯುಗಾದಿಯಂದು ಶೋಭಾ ಯಾತ್ರೆಯ ನಂತರ ನಡೆಯುವ ಧರ್ಮ ಸಭೆಯಲ್ಲಿ ಸ್ವರ್ಣವಲ್ಲಿ, ಬಣ್ಣದಮಠ ಹಾಗೂ ಸ್ವಾದಿ ಮಠದ ಶ್ರೀಗಳು ಭಾಗ ವಹಿಸಿ ಯುಗಾದಿ ಸಂದೇಶ ನೀಡುವರು ಎಂದು ತಿಳಿಸಿದರು. ಜಗದೀಶ ನಾಯ್ಕ, ಸುರೇಶ ಶೆಟ್ಟಿ, ವಿಠ್ಠಲ ಪೈ, ಉಪೇಂದ್ರ ಪೈ, ರವಿ ಹೆಗಡೆ, ಶ್ರೀಧರ ಮೊಗೇರ ಇದ್ದರು.