ಬಳ್ಳಾರಿ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದೆ. ಅದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆಯ ಪಾತ್ರವೇನು?. ಅಕ್ರಮ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈವರೆಗೆ ಮದ್ಯ ಮಾರಾಟಗಾರರ ಮೇಲೆ ತೆಗೆದುಕೊಂಡ ಕಠಿಣ ಕ್ರಮಗಳೇನು ಹೀಗೆ ಮೇಲಿಂದ ಮೇಲೆ ಪ್ರಶ್ನೆಗಳ ಸುರಿಮಳೆ ಹರಿಯಿತು.
ಇದೆಲ್ಲ ನಡೆದಿದ್ದು, ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾಮಟ್ಟದ ದಲಿತ ಸಮುದಾಯದ ಮಹತ್ವದ ಸಭೆಯಲ್ಲಿ.
ಬಳ್ಳಾರಿ ತಾಲ್ಲೂಕಿನ ಕಪ್ಪಗಲ್ಲು, ಸಿರಿವಾರ ಹಾಗೂ ತಾಳೂರು ಗ್ರಾಮಗಳೂ ಸೇರಿದಂತೆ ಇತರೆಡೆ ದಲಿತರಿಗೆ ಕ್ಷೌರಿಕ ಅಂಗಡಿ, ಹೊಟೇಲ್ ಮತ್ತು ದೇವಾಲಯಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಕುರಿತು ಹಲವು ಬಾರಿ ಆಯಾ ಠಾಣೆಯ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.
ಇಂಥಹ ಅನಿಷ್ಠ ಪದ್ಧತಿಯನ್ನು ತೊಲಗಿಸಲು ಪೊಲೀಸ್ ಇಲಾಖೆಯು ಕೈಗೊಂಡಿರುವ ಕಠಿಣ ನಿಲುವುಗಳೇನು ಎಂಬುದು ಸ್ಪಷ್ಪಪಡಿಸಬೇಕು ಎಂದು ಸಂಗನಕಲ್ಲು ವಿಜಯಕುಮಾರ ಅವರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಲ್.ಜಂಡೇಕರ್ ಅವರನ್ನು ಪ್ರಶ್ನಿಸಿದರು.
ಅದಕ್ಕೆ ಕೆಲಕಾಲ ತಬ್ಬಿಬ್ಬಾದ ಅವರು, ಆಯ್ತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತಾವಿನ್ನೂ ಹೊಸದಾಗಿ ಬಂದಿದ್ದೀರಿ ಸಾಹೇಬ್ರ. ಈ ಮೊದಲು ನಡೆದ ಪ್ರಸಂಗಗಳಿವೆ. ಈವ ರೆಗೂ ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆಯ ಕುರಿತು ಸಾರ್ವಜನಿಕರಲ್ಲಿ ಅಪಾರ ಗೌರವವಿದೆ. ಅದಕ್ಕೆ ತಕ್ಕುದಾಗಿ ನಡೆದು ಕೊಳ್ಳುವುದು ಸಹ ಕರ್ತವ್ಯ ಅಲ್ಲವೇ ಸಾರ್ ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಅಂಥಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಹಿಂದಿನ ಪ್ರಕರಣಗಳು ಕುರಿತು ಕೂಲಂಕಷವಾಗಿ ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದರು.
ಕಾನೂನು ಅರಿವು; ಮನವಿ: ತಾಲ್ಲೂಕಿನ ಪರಿಶಿಷ್ಟ ಜಾತಿ, ಪಂಗಡ ಸಮುದಾ ಯದವರು ತುಳಿತಕ್ಕೆ ಒಳಗಾಗಿದ್ದಾರೆ. ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಘಟನೆಗಳು ನಡೆಯುತ್ತಿವೆ.
ಅವುಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸೂಕ್ತಕ್ರಮ ಕೈಗೊಳ್ಳಬೇಕು ಹಾಗೂ ಪರಿಶಿಷ್ಟರಲ್ಲಿ ಅವಿದ್ಯಾವಂತರು ಜಾಸ್ತಿಯಿದ್ದು, ಸಾಮಾನ್ಯ ಕಾನೂನಿನ ಅರಿವು ಮೂಡಿಸುವ ಕಾರ್ಯ ಇಲಾಖೆ ವತಿ ಯಿಂದ ವ್ಯಾಪಕವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖ ರಾಗ ಬೇಕು ಎಂದು ಯುವವಕೀಲ ಸಂಗನ ಕಲ್ಲು ಸಿ.ಈಶ್ವರರಾವ್ ಕೋರಿದರು.
ಮುಖಂಡರಾದ ಶ್ರೀನಿವಾಸ ಕರ್ಚೇಡು, ದುರ್ಗೇಶ, ಶಂಕರಪ್ಪ ಸೇರಿದಂತೆ ಜಿಲ್ಲೆಯ ಕಂಪ್ಲಿ, ಕೂಡ್ಲಿಗಿ, ಕುರುಗೋಡು, ಹೊಸಪೇಟೆ, ಸಂಡೂರು, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿಯ ನೂರಾರು ದಲಿತ ಮುಖಂಡರು ಪಾಲ್ಗೊಂಡಿದ್ದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮನಗೌಡ ಕನ್ನೊಳ್ಳಿ, ಹೊಸಪೇಟೆ ಉಪವಿಭಾಗದ ಡಿವೈಎಸ್ಪಿ ಕುಮಾರ ಚಂದ್ರ, ಇನ್ಸ್ಪೆಕ್ಟರ್ಗಳಾದ ಶ್ರೀಧರ ದೊಡ್ಡಿ, ಎಚ್.ಶಫೀಉಲ್ಲಾ, ಜಿ.ಎಸ್. ಹೆಬ್ಬಾಳ್, ಕೆ.ಪ್ರಸಾದ ಗೋಖಲೆ, ಸಬ್ ಇನ್ಸ್ಪೆಕ್ಟರ್ ವೈ.ಎಸ್.ಹನುಮಂತಪ್ಪ ಮತ್ತಿತರರು ಇದ್ದರು.
‘ತಾತ್ಸಾರ ಬೇಡ’
ದಲಿತರ ಮೇಲಿನ ದೌರ್ಜನ್ಯ, ಜಾತಿ ನಿಂದನೆ ಸೇರಿದಂತೆ ಇತರೆ ಪ್ರಕರಣಗಳನ್ನು ದಾಖಲಿಸಲು ಕೆಲವೊಂದು ಪೊಲೀಸ್ ಠಾಣೆಗಳಲ್ಲಿ ತಾತ್ಸಾರ ಮಾಡಲಾಗುತ್ತದೆ. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ. ಅಂಥಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಕೂಡಲೇ ದಲಿತರ ದೂರುಗಳನ್ನಾಧರಿಸಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಕಪ್ಪಗಲ್ಲು ಓಂಕಾರಪ್ಪ ವಿನಂತಿಸಿದರು.