ದುಬೈ/ಇಸ್ಲಾಮಾಬಾದ್: ಪಾಕಿಸ್ತಾನ ಮೂಲದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಆತನ ಕುಟುಂಬ ಕ್ಷಮೆ ನೀಡಿರುವುದರಿಂದ ಭಾರತದ ಹತ್ತು ಯುವಕರು ಗಲ್ಲುಶಿಕ್ಷೆಯಿಂದ ಪಾರಾಗಿದ್ದಾರೆ.
ಮೃತ ವ್ಯಕ್ತಿಯ ಕುಟುಂಬವು ಪರಿಹಾರವಾಗಿ ₹35 ಲಕ್ಷ (2 ಲಕ್ಷ ದಿರ್ಹಾಮ್) ಪಡೆದು ಅಪರಾಧಿಗಳನ್ನು ಕ್ಷಮಿಸಲು ಒಪ್ಪಿಕೊಂಡಿದೆ. ಈ ಸಂಬಂಧ ಹತ್ಯೆಯಾದ ಮೊಹಮ್ಮದ್ ಫರ್ಹಾನ್ನ ತಂದೆ ಮೊಹಮ್ಮದ್ ರಿಯಾಜ್ ಯುನೈಟೆಡ್ ಅರಬ್ ಎಮಿರೇಟ್ಸ್ನ ನ್ಯಾಯಾಲಯಕ್ಕೆ ಪತ್ರ ನೀಡಿದ್ದಾರೆ.
ಅಲ್ ಐನ್ನಲ್ಲಿ 2016ರ ಡಿಸೆಂಬರ್ನಲ್ಲಿ ಕಳ್ಳಭಟ್ಟಿ ತಯಾರಿಕೆಗೆ ಸಂಬಂಧಿಸಿದಂತೆ ನಡೆದಿದ್ದ ಜಗಳದಲ್ಲಿ ಫರ್ಹಾನ್ನನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪಂಜಾಬ್ನ 11 ಯುವಕರು ತಪ್ಪಿತಸ್ಥರು ಎಂದು ಸಾಬೀತಾಗಿತ್ತು. ಅವರಲ್ಲಿ 10 ಮಂದಿಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು.
ದುಬೈ ಮೂಲದ ಉದ್ಯಮಿ ಎಸ್.ಪಿ.ಎಸ್. ಒಬೆರಾಯ್ ಅವರ ಸಂಸ್ಥೆಯ ಸಿಬ್ಬಂದಿ ಪಾಕಿಸ್ತಾನಕ್ಕೆ ತೆರಳಿ ಕ್ಷಮಾದಾನ ನೀಡುವಂತೆ ಕುಟುಂಬದ ಸದಸ್ಯರ ಮನವೊಲಿಸಿದ್ದರು. ಹಣವನ್ನೂ ಒಬೆರಾಯ್ ಅವರೇ ನೀಡಿದ್ದಾರೆ.