ಬೆಂಗಳೂರು: ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ತಯಾರಿಸುವ ಕಾಂಪೋಸ್ಟ್ ಖರೀದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಎಲ್ಲ ವಾರ್ಡ್ ಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ, ಬಿಬಿಎಂಪಿ ಸಹಯೋಗದಲ್ಲಿ ವಿಧಾನಸೌಧದ ಮುಂಭಾಗ ಏರ್ಪಡಿಸಿದ್ದ ‘ರೈತರಿಗೆ ಕಾಂಪೋಸ್ಟ್ ವಿತರಣೆ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
‘ನಗರವನ್ನು ಸ್ವಚ್ಛವಾಗಿಡಲು ಜನ ಸಹಕರಿಸಬೇಕು. ಕಸ ವಿಂಗಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ನಮ್ಮ ಮನೆಯಲ್ಲೂ ಕಸ ವಿಂಗಡಿಸಲು ತಿಳಿಸುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದರು.
ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಸುಸ್ಥಿರ ತ್ಯಾಜ್ಯ ವಿಲೇವಾರಿ ಗಾಗಿ ಬಿಬಿಎಂಪಿಗೆ ಸರ್ಕಾರ ₹ 450 ಕೋಟಿ ನೀಡಿದೆ. ನಗರದಲ್ಲಿ ಶೇ 50 ರಷ್ಟು ಕಸ ವಿಂಗಡಣೆ ಆಗುತ್ತಿದ್ದು, ಈ ವಿಷಯದಲ್ಲಿ ಬೆಂಗಳೂರು ದೇಶಕ್ಕೆ ಮಾದರಿಯಾಗಿದೆ ಎಂದರು.
ಪ್ರತಿ ಟನ್ ಕಾಂಪೋಸ್ಟ್ ಗೊಬ್ಬರಕ್ಕೆ ₹ 800 ದರ ನಿಗದಿಪಡಿಸಿ ರೈತರಿಗೆ ನೀಡಲಾಗುವುದು. ಸಾಗಣೆ ವೆಚ್ಚವನ್ನು ಅವರೇ ಭರಿಸಿದರೆ ₹200ಕ್ಕೇ ನೀಡಲಾಗುವುದು ಎಂದು ಹೇಳಿದರು.