ನವದೆಹಲಿ: ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ನಿಗದಿತ ಕನಿಷ್ಠ ಮೊತ್ತ ಕಾಪಾಡದ ಗ್ರಾಹಕರಿಗೆ ವಿಧಿಸುವ ದಂಡ ನ್ಯಾಯೋಚಿತವಾಗಿರಲಿ ಎಂದು ಕೇಂದ್ರ ಸರ್ಕಾರವು ಮಂಗಳವಾರ ಬ್ಯಾಂಕ್ಗಳಿಗೆ ಸಲಹೆ ನೀಡಿದೆ.
ಕನಿಷ್ಠ ಮೊತ್ತ ಕಾಪಾಡದ ಖಾತೆಗಳಿಗೆ ದಂಡ ವಿಧಿಸುವ ಬ್ಯಾಂಕ್ಗಳ ನಿರ್ಧಾರಕ್ಕೆ ಯಾವುದೇ ಆಕ್ಷೇಪ ಇಲ್ಲ. ಆದರೆ, ದಂಡದ ಮೊತ್ತ ಮಿತಿ ಮೀರಬಾರದು. ಸಮಂಜಸವಾಗಿರಬೇಕು ಎಂದು ಸರ್ಕಾರ ಹೇಳಿದೆ.
‘ಆರ್ಬಿಐ ನಿಯಮಾವಳಿಯಂತೆ ಕನಿಷ್ಠ ಮೊತ್ತ ಮತ್ತು ದಂಡದ ಬಗ್ಗೆ ಒಂದು ತಿಂಗಳ ಮೊದಲೇ ಬ್ಯಾಂಕ್ಗಳು ಗ್ರಾಹಕರಿಗೆ ಸೂಚನೆ ನೀಡಬೇಕು’ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ ಕುಮಾರ ಗಂಗ್ವಾರ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಉಳಿತಾಯ ಖಾತೆ ಆರಂಭಿಸುವಾಗ ಆದ ಒಪ್ಪಂದದಂತೆ, ಖಾತೆಯಲ್ಲಿ ಇರಬೇಕಾದ ಕನಿಷ್ಠ ಮತ್ತು ವಾಸ್ತವದಲ್ಲಿ ನಿರ್ವಹಿಸಬೇಕಾದ ಮೊತ್ತದ ಮಧ್ಯೆ ಇರುವ ವ್ಯತ್ಯಾಸ ಆಧರಿಸಿ ದಂಡ ವಿಧಿಸಬಹುದು ಎಂದು ತಿಳಿಸಿದ್ದಾರೆ.
ಬಡ್ಡಿ ದರ ಇಳಿಕೆ?
ಮುಂಬೈ ವರದಿ: ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರ ಇಳಿಸುವ ಸಾಧ್ಯತೆಗಳನ್ನು ಬ್ಯಾಂಕ್ಗಳು ಪರಿಶೀಲಿಸುತ್ತಿವೆ ಎಂದು ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಸಂಸ್ಥೆ ಜೆಫೆರೀಸ್ ಹೇಳಿದೆ.
ಸಾಲ ನೀಡಿಕೆ ವೃದ್ಧಿ ಕುಸಿದ ಕಾರಣಕ್ಕೆ ಬಡ್ಡಿದರ ಇಳಿಸಿ, ಕಾರ್ಯನಿರ್ವಹಣಾ ಲಾಭ ಹೆಚ್ಚಿಸಿಕೊಳ್ಳುವ ಉದ್ದೇಶ ಹೊಂದಿವೆ. ಸದ್ಯ, ಬಹುತೇಕ ಬ್ಯಾಂಕ್ ಶೇ 4ರಷ್ಟು ಬಡ್ಡಿ ಪಾವತಿಸುತ್ತಿವೆ.