ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಕೆಲವೆಡೆ ಭಾನುವಾರ ಲಘು ಭೂಕಂಪದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಾಲ್ಲೂಕಿನ ಚಿಕ್ಕಬ್ಯಾಲದಕೆರೆ, ಕಂಚೀಪುರ, ಕಿಟ್ಟದಾಳ್, ನಾಗತಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾನುವಾರ ಬೆಳಿಗ್ಗೆ 6.45ರ ಸುಮಾರಿಗೆ ಕಂಪನದ ಅನುಭವವಾಗಿದೆ.
ಕಂಪನದ ಅನುಭವದಿಂದ ಗಾಬರಿಗೊಂಡ ಗ್ರಾಮಸ್ಥರು ಮನೆಗಳಿಂದ ತಕ್ಷಣ ಹೊರಗೆ ಓಡಿಬಂದಿದ್ದಾರೆ.
ತುಮಕೂರು ವರದಿ: ತುಮಕೂರು ಜಿಲ್ಲೆಯ ಕೆಲ ಗ್ರಾಮಗಳಲ್ಲೂ ಕಂಪನದ ಅನುಭವವಾಗಿದೆ ಎನ್ನಲಾಗಿದೆ. ಹುಳಿಯಾರು ಹೋಬಳಿಯ ಕೆಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಹುಳಿಯಾರು ಹೋಬಳಿಯ ಗಾಣಧಾಳು, ಗುರುವಾಪುರ, ಸೋಮನಹಳ್ಳಿ, ದಸೂಡಿ, ದಬ್ಬಗುಂಟೆ ಗ್ರಾಮಗಳಲ್ಲಿ ಲಘು ಭೂಕಂಪವಾಗಿದೆ.
‘ಎರಡು ಸೆಕೆಂಡ್ ಭೂಮಿ ಕಂಪಿಸಿತು. ಮನೆಯೊಳಗಿದ್ದ ನಾವು ಭಯದಿಂದ ಹೊರಗೆ ಓಡಿ ಬಂದೆವು’ ಎಂದು ದಬ್ಬಗುಂಟೆ ಗ್ರಾಮದ ದಸ್ತಗೀರ್ ಹೇಳಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸೋಮನಹಳ್ಳಿ ಗೊಲ್ಲರಹಟ್ಟಿಯ ಬಾಲಮ್ಮ ಮತ್ತು ಶಿವಣ್ಣ ಎಂಬುವರ ಮನೆ ಗೋಡೆಗಳು ಬಿರುಕು ಬಿಟ್ಟಿವೆ. ಬಂಡಿಲಕ್ಕಮ್ಮ ಎಂಬುವರ ಮನೆಯ ಮಾಡಿನ ಶೀಟ್ಗಳು ಅಲುಗಾಡಿವೆ.