ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಾಷೆ ಮಾಡುವ ಮುನ್ನ ಒಮ್ಮೆ ಯೋಚಿಸಿ

Last Updated 4 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಡಾ. ಕೆ.ಎಸ್. ಶುಭ್ರತಾ
ಅಂದು ಸ್ನೇಹಿತನ ಮದುವೆ ಮುಗಿಸಿ ಬಂದ ತಕ್ಷಣ ಗೀತಾ ಮತ್ತು ವಿನೋದ್‌ ನಡುವೆ ಜಗಳ ಶುರುವಾಯ್ತು. ಜಗಳಕ್ಕೆ ಕಾರಣ ಹೊಸದೇನಲ್ಲ. ಕೇಳಿದವರಿಗೆ ಅದು ಕ್ಷುಲ್ಲಕ ಎಂದೂ ಅನಿಸಬಹುದೇನೋ. ವಿನೋದನಿಗೂ ಹಾಗೇ ಅನ್ನಿಸಿದ್ದು ನಿಜ. ಆದರೆ ಗೀತಾಳ ಮನಸ್ಸಿಗೆ ಸಾಕಷ್ಟು ನೋವಾಗಿತ್ತು. ಅವಳಿಗೆ ಅದು ಸಣ್ಣ ಸಂಗತಿ ಅನಿಸಿಲ್ಲ.
 
ಆದದ್ದು ಇಷ್ಟೇ.
ಅಂದು ಗೀತಾ ಮತ್ತು ವಿನೋದ್‌ ದಂಪತಿ ಸ್ನೇಹಿತರೊಬ್ಬರ ಮದುವೆಗೆ ಹೋಗಿದ್ದರು. ಮದುವೆಯಲ್ಲಿ ಇವರ ಕುಟುಂಬದ ಸ್ನೇಹಿತರು ತುಂಬ ದಿನಗಳ ಮೇಲೆ ಸಿಕ್ಕಿದ್ದರು. 
 
ಗೀತಾಳನ್ನು ನೋಡಿದ್ದೇ ಅವರ ಬಾಯಿಯಲ್ಲಿ ಬಂದ ಮೊದಲ ವಾಕ್ಯ ‘ಅಯ್ಯೋ, ಎಷ್ಟು ದಪ್ಪವಾಗಿದ್ದೀರಾ, ನೀವು’. ನಂತರ ಅವರ ದೃಷ್ಟಿ ಹೊರಳಿದ್ದು ವಿನೋದ್‌ನತ್ತ. ಅವನ ಕುರಿತಾಗಿಯೂ ಅವರ ಬಳಿ ಮಾತೊಂದು ಸಿದ್ಧವಿತ್ತು.
 
‘ಗೀತಾ, ನಿಮ್ಮ ಯಜಮಾನರು ಎಷ್ಟು ಸಣ್ಣವಾಗಿದ್ದಾರೆ. ಏನು ಸರಿಯಾಗಿ ಊಟ ಹಾಕುತ್ತಿಲ್ಲವೋ ಹೇಗೆ?’ ಎಂದು ಜೋರಾಗಿ ನಕ್ಕರು.
 
ವಿನೋದ್‌ನೇನೋ ಅವರ ತಮಾಷೆಗೆ ನಗುತ್ತಾ ಬೇರೆ ವಿಷಯಕ್ಕೆ ಮಾತನ್ನು ತಿರುಗಿಸಿದ. ಆದರೆ ಗೀತಾಳ ಮುಖ ಮಾತ್ರ ಸಣ್ಣಗಾಯಿತು. ಮದುವೆ ಮುಗಿಸಿ, ಊಟ ಮಾಡಿಯಾಯಿತು. ಮನೆಗೆ ಬರುವಾಗಲೂ ಗೀತಾಳ ಮುಖ ಸಣ್ಣಗಾಗಿಯೇ ಇದ್ದಿದ್ದನ್ನು ನೋಡಿ, ವಿನೋದನಿಗೆ ಅವಳ ಮನಸ್ಥಿತಿ ಅರ್ಥವಾಯ್ತು. 
 
ಮನೆಗೆ ಬರುವುದನ್ನೇ ಕಾದಿದ್ದ ಗೀತಾ ತನ್ನ ಬೇಸರವನ್ನು ಗಂಡನ ಬಳಿ ಹೇಳಿಕೊಂಡಳು. ಅವಳ ಮಾತಿಗೆ ವಿನೋದ ಎಂದಿನಂತೆ ‘ಪಾಪ, ಅವರು ಕೆಟ್ಟ ಉದ್ದೇಶದಿಂದ ಹೇಳಿರಲಿಕ್ಕಿಲ್ಲ? ನೀನ್ಯಾಕೆ ಸುಮ್ಮಸುಮ್ಮನೆ ತಲೆಕೆಡಿಸಿಕೊಳ್ಳುತ್ತೀಯಾ?’ ಎಂದುಬಿಟ್ಟ. ಆಗಂತೂ ಗೀತಾಳಿಗೆ ಅದುಮಿಟ್ಟುಕೊಂಡಿದ್ದ ದುಃಖ ಕಣ್ಣೀರಾಗಿ ದಳದಳ ಹರಿಯಲಾರಂಭಿಸಿತು.
***
ಇದು ಗೀತಾಳೊಬ್ಬಳ ಕಥೆಯಷ್ಟೇ ಅಲ್ಲ. ಈ ಮನಸ್ಥಿತಿಯನ್ನು ಬಹಳಷ್ಟು ಮಹಿಳೆಯರಲ್ಲಿ ಕಾಣುತ್ತೇವೆ. ಮನುಷ್ಯನ ಸ್ವಭಾವವನ್ನು ವಿಶ್ಲೇಷಿಸಿದಾಗ, ಪುರುಷನಿಗಿಂತ ಮಹಿಳೆ ತನ್ನ ಸುತ್ತಮುತ್ತಲಿನ ಜಗತ್ತಿನೊಂದಿಗೆ ಹೆಚ್ಚು ಭಾವನಾತ್ಮಕವಾಗಿ ಸ್ಪಂದಿಸುತ್ತಾಳೆ ಎಂದು ತಿಳಿಯುತ್ತದೆ. ‘ನನಗೇನನ್ನಿಸುತ್ತದೆ’ ಎನ್ನುವುದಕ್ಕಿಂತ ‘ಪರರು ಏನು ತಿಳಿದಾರು?’ ಎಂಬ ಚಿಂತೆಯೇ ಅವಳಿಗೆ ಜಾಸ್ತಿ. ಈ ಗುಣಲಕ್ಷಣದಿಂದಾಗಿ ಮಹಿಳೆ ಇತರರ ಟೀಕೆಗೆ ಗುರಿಯಾದಾಗ, ಹೆಚ್ಚು ನೋವಿಗೆ  ಒಳಗಾಗುತ್ತಾಳೆ.
 
ನೀವು ಟೀಕೆ ಮಾಡುವವರಾದರೆ...
ಎಲ್ಲರ ಸ್ವಭಾವವೂ ಒಂದೇ ಇರುವುದಿಲ್ಲ. ಕೆಲವರು ಟೀಕೆಗಳನ್ನು ಹಾಸ್ಯಮಯವಾಗಿ ತೆಗೆದುಕೊಳ್ಳಬಹುದು. ಇನ್ನು ಕೆಲವರು ಅಲಕ್ಷ್ಯ ಮಾಡಬಹುದು. ಮತ್ತೆ ಕೆಲವರು ತಿರುಗಿ ಉತ್ತರ ನೀಡಬಹುದು. ಇನ್ನಷ್ಟು ಜನ ನೊಂದುಕೊಳ್ಳಬಹುದು.
 
ಯಾರ ಸ್ವಭಾವ ಹೇಗೆ ಇದ್ದರೂ, ಇನ್ನೊಬ್ಬರ ಬಾಹ್ಯ ನೋಟದ ಬಗ್ಗೆ  ಟೀಕಿಸುವುದು ಸರಿಯಲ್ಲ. ನಿಜವಾದ ಕಾಳಜಿ, ಪ್ರೀತಿ ಇದ್ದರೆ ಅದನ್ನು ಹೇಳುವುದಕ್ಕೆ ರೀತಿಯಿದೆ/ ಕ್ರಮವಿದೆ. 
 
ಇನ್ನೊಬ್ಬ ವ್ಯಕ್ತಿಯನ್ನು ನೋಡಿದಾಕ್ಷಣ, ‘ನೀನು ದಪ್ಪ ಆಗಿದ್ದೀಯಾ, ಸಣ್ಣ ಆಗಿದ್ದೀಯಾ’ ಎಂದು ಮಾತು ಪ್ರಾರಂಭ ಮಾಡುವ ಅಗತ್ಯವಿಲ್ಲ. ಬೇರೆ ಮಾತನಾಡಿ, ಅವರೊಬ್ಬರನ್ನೇ ಕರೆದು, ಕಾಳಜಿಯಿಂದ ‘ನೀನು ತುಂಬ ತೆಳ್ಳಗಾಗಿದ್ದೀಯಾ, ಆರೋಗ್ಯ ನೋಡಿಕೋ’ ಅಥವಾ ‘ನಿನ್ನ ತೂಕ ಜಾಸ್ತಿಯಾಗಿದೆ, ವ್ಯಾಯಾಮದ ಅಗತ್ಯವಿದೆಯೇನೋ, ಆರೋಗ್ಯದ ಕಡೆ ಗಮನಹರಿಸು’ ಎನ್ನಬಹುದು. ಅದು ಬಿಟ್ಟು ‘ನಿನ್ನ ಹೆಂಡತಿ ಊಟ ಹಾಕುತ್ತಿಲ್ಲವೇನೋ’ ಎಂಬ ಕುಹಕ ಮಾತು ಹೇಳಿದರೆ ಯಾರಿಗೆ ತಾನೇ ಬೇಸರವಾಗುವುದಿಲ್ಲ?
 
ನಾವು ಸೂಕ್ಷ್ಮವಾಗಿದ್ದರೆ, ಇನ್ನೊಬ್ಬರಿಗೆ ಯಾವುದು ನೋವಾಗುತ್ತದೆ ಎಂಬುದನ್ನು ತಿಳಿದು, ತಡೆಯಲು ಸಾಧ್ಯ.
ಇನ್ನೊಬ್ಬರಿಗೆ ನೋವುಂಟು ಮಾಡುವಂಥ ತಮಾಷೆ ಖಂಡಿತ ಆರೋಗ್ಯಕರವಾದದ್ದಲ್ಲ. ಹಾಗೆಯೇ ಯಾರಿಗೂ ಬೇಸರವಾಗದ ಹಾಗೆಯೇ ಹಾಸ್ಯಮಾಡುವುದು ಅಸಾಧ್ಯವೇನೂ ಅಲ್ಲ. ಆದರೆ ಆ ಸೂಕ್ಷ್ಮತೆಯು ನಮ್ಮಲ್ಲಿ ಇರಬೇಕಾಗುತ್ತದಷ್ಟೆ. ಆರೋಗ್ಯಕರ ಹಾಸ್ಯ ಪ್ರಜ್ಞೆಯನ್ನು ನಾವೇ ರೂಢಿಸಿಕೊಳ್ಳಬೇಕು. 
 
ಟೀಕೆಗೆ ಒಳಗಾದಾಗ
ನಾವು ಯೋಚಿಸುವ ರೀತಿ ಹೇಗಿರುತ್ತದೆ ಎನ್ನುವುದರ ಮೇಲೆ ನಮ್ಮ ವರ್ತನೆಗಳು ಭಾವನೆಗಳು ಅವಲಂಬಿತವಾಗಿರುತ್ತವೆ. ಇತರರ ಟೀಕೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದೂ ನಮ್ಮ ಯೋಚನಾ ಶೈಲಿಯಿಂದ ನಿರ್ಧರಿತವಾಗುತ್ತದೆ. ಬೇರೆಯವರು ಟೀಕೆ ಮಾಡಿದಾಗ ಮನಸ್ಸು ನೊಂದುಕೊಳ್ಳುವುದಕ್ಕೂ ಯೋಚನಾ ಶೈಲಿಯೇ ಕಾರಣ.

‘ನೀನು ದಪ್ಪಗಾಗಿದ್ದೀಯಾ’ ಎಂದು ನಿಮ್ಮ ಸ್ನೇಹಿತೆ ಹೇಳಿದಾಗ ನಿಮ್ಮ ಮನಸ್ಸಿನಲ್ಲಿ ಹಲವಾರು ಯೋಚನೆಗಳು ಪುಟಿದೇಳುತ್ತವೆ. ‘ನನ್ನನ್ನು ಅವಮಾನಿಸಲೆಂದೇ ಈ ವ್ಯಕ್ತಿ ಪ್ರತಿಬಾರಿ ಹೀಗೆ ಹೇಳುತ್ತಾಳೆ!’  ‘ನಾನು ದಪ್ಪವಾಗಿ, ಅಸಹ್ಯವಾಗಿ ಕಾಣುತ್ತಿದ್ದೇನೆ’, ‘ಇವರಿಗೆ ನನ್ನ ಕಂಡರೆ ಹೊಟ್ಟೆಕಿಚ್ಚು’ ಇತ್ಯಾದಿ ಯೋಚನೆಗಳು. ಈ ಆಲೋಚನೆಗಳೇ ನಮಗೆ ನೋವುಂಟು ಮಾಡುತ್ತವೆ.

ಅದರ ಬದಲು ‘ಈ ವ್ಯಕ್ತಿಯ ಸ್ವಭಾವವೇ ಹೀಗೆ’, ‘ನಾನು ದಪ್ಪವಿದ್ದರೂ, ಆರೋಗ್ಯವಾಗಿದ್ದೇನೆ, ವ್ಯಾಯಾಮ ಮಾಡುತ್ತಿದ್ದೇನೆ, ಅವರು ಏನು ಹೇಳಿದರೂ ಆಗಬೇಕಾದ್ದೇನು?’, ‘ದಾರಿಯಲ್ಲಿ ಹೋಗುವವರು ಹೇಳಿದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಕೇ?’ ಎಂದು ಯೋಚಿಸಿದರೆ ಮನಸ್ಸಿಗೆ ನೋವಾಗುವುದಿಲ್ಲ.

ಇದು ನಿಧಾನವಾಗಿ ನಮ್ಮ ಯೋಚನಾ ಶೈಲಿ ಬದಲಾಯಿಸುವುದಾಯಿತು. ಆದರೆ ಕ್ಷಣದಲ್ಲಿ, ಟೀಕೆ ಎದುರಾದ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದೂ ಪ್ರಶ್ನೆ.

ಅಲಕ್ಷ್ಯ ಮಾಡಿ, ಬೇರೆ ವಿಷಯದೆಡೆ ಗಮನ ಹರಿಸಬಹುದು. ಇಲ್ಲವೇ, ತಿರುಗಿ ಅವರದೇ ಭಾಷೆಯಲ್ಲಿ ಉತ್ತರ ಹೇಳುವ ಸಾಮರ್ಥ್ಯವಿದ್ದರೆ ಅದನ್ನೂ ಮಾಡಬಹುದು. ಉದಾಹರಣೆಗೆ: ‘ನೀವು ನಿಮ್ಮ ಗಂಡನಿಗೆ ಊಟ ಹಾಕುತ್ತಿಲ್ಲವೇನೋ’ ಎಂದಾಗ ‘ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿ, ನಿಮಗೆ ಅಷ್ಟು ಕಾಳಜಿ ಇದ್ದರೆ’ ಎಂದು ನಿಷ್ಠುರವಾಗಿ ಹೇಳಿಬಿಡಬಹುದು.

ಅದೂ ಆಗದಿದ್ದರೆ ನೇರವಾಗಿ ‘ನೀವು ಪ್ರತಿ ಬಾರಿ ಈ ರೀತಿ ಮಾತನಾಡುವುದು ನನಗೆ ಇಷ್ಟವಿಲ್ಲ. ದಯವಿಟ್ಟು ಹಾಗೆ ಮಾತನಾಡಬೇಡಿ’ ಎಂದು ಸ್ಪಷ್ಟವಾಗಿ ತಿಳಿಸಬಹುದು.

ಒಟ್ಟಿನಲ್ಲಿ  ನಮ್ಮ ಟೀಕೆಗಳು ಇತರರ ಮನಸ್ಸಿಗೆ ನೋವುಂಟು ಮಾಡದ ಹಾಗೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಅಂತೆಯೇ ಇತರರು ಟೀಕಿಸಿದಾಗ, ಅದನ್ನು ಸಮರ್ಥವಾಗಿ ಎದುರಿಸಿ ಅಥವಾ ಅಲಕ್ಷಿಸಿ, ನಮ್ಮ ಮನಸ್ಸನ್ನು ಸ್ವಸ್ಥವಾಗಿಟ್ಟುಕೊಳ್ಳುವುದೂ ನಮ್ಮ ಕರ್ತವ್ಯವೇ. ಅದನ್ನು ರೂಢಿಸಿಕೊಂಡರೆ ನಮ್ಮ ವ್ಯಕ್ತಿತ್ವವೂ ಇನ್ನಷ್ಟು ಗಟ್ಟಿಯಾಗುತ್ತದೆ.
 
ಪುರವಣಿಯ ಕುರಿತು ನಿಮ್ಮ ಅನಿಸಿಕೆಗಳನ್ನು ಈ ನಂಬರ್‌ಗೆ ವಾಟ್ಯ್ಸಾಪ್ ಮಾಡಿ: 9842006746
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT